ರಾಜ್ಯದಲ್ಲಿ ವಿದ್ಯುತ್ ಅಭಾವ ಇಲ್ಲ,ಇನ್ಮುಂದೆ ನಿರಂತರ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ನಾಗರಿಕರು ಘೇರಾವ್ ಹಾಕಿ ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆಯಿತು.
ಇಲ್ಲಿನ ಕುಂಬಳಗೋಡು, ರಾಮೋಹಳ್ಳಿ ಹಾಗೂ ಸೂಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಶೋಭಾ ಆಗಮಿಸಿದ್ದರು. ಈ ವೇಳೆ ಅವರನ್ನು ಮುತ್ತಿದ ಸಾರ್ವಜನಿಕರು, ಕಂಬೀಪುರದಲ್ಲಿ ವಾರದಿಂದ ಕರೆಂಟ್ ಇಲ್ಲದೆ ಕತ್ತಲೆಯಲ್ಲಿ ಕಾಲ ಕಳೆಯುಂತಾಗಿದ್ದು, ವಿದ್ಯಾರ್ಥಿಗಳ ಓದಿಗೂ ಅಡ್ಡಿಯಾಗಿದೆ. ನಿಮ್ಮ ಕ್ಷೇತ್ರದಲ್ಲಿಯೇ ಈ ಸ್ಥಿತಿಯಲ್ಲಿದ್ದರೆ ರಾಜ್ಯದ ಗತಿಯೇನು ಎಂದು ತರಾಟೆಗೆ ತೆಗೆದುಕೊಂಡರು.
ಕ್ಷೇತ್ರದ ಸಮಸ್ಯೆ ಬಗ್ಗೆ ದೂರು ಸಲ್ಲಿಸೋಣ ಎಂದರೆ ನೀವು ಸಿಗುವುದೇ ಇಲ್ಲ. ಈ ಸೌಭಾಗ್ಯಕ್ಕಾಗಿ ನಾವು ನಿಮ್ಮನ್ನು ಗೆಲ್ಲಿಸಬೇಕಿತ್ತಾ?ಕಾಮಗಾರಿಕೆ ಪೂಜೆ ಇದ್ದರೆ ಮಾತ್ರ ಹಾಗೆ ಬಂದು ಹೀಗೆ ಹೋಗುವ ನೀವು ಜನರಿಗೆ ಸಿಗುವುದು ಯಾವಾಗ ? ಎಂದು ಪ್ರಶ್ನಿಸಿದರು. ಇದರಿಂದ ಗಾಬರಿಗೊಂಡ ಸಚಿವೆ, ಸ್ವಲ್ಪ ಹೊತ್ತು ಮೌನಕ್ಕೆ ಶರಣಾದರು. ನಂತರ ಅಧಿಕಾರಿಗಳನ್ನು ಕರೆಸಿ, ತಕ್ಷಣದಿಂದಲೇ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಆದೇಶಿಸಿದರು.
ರಾಮೋಹಳ್ಳಿಯ ವಿನಾಯಕ ನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪೂಜೆ ಸಲ್ಲಿಸಿ, ಮಡಿಲು ಫಲಾನುಭವಿಗಳಿಗೆ ಸೀರೆ ವಿತರಿಸಿದ ಶೋಭಾ, ಅಹವಾಲು ಆಲಿಸಲು ಸಮಯವಿಲ್ಲ ಮತ್ತೆ ಬರುವೆ ಎಂದು ಜಾರಿಕೊಂಡರು.