ಈಶ್ವರಪ್ಪರದ್ದು ಸ್ವಂತ ಅಭಿಪ್ರಾಯ, ಎಲ್ಲವೂ ಸರಿಯಿದೆ: ಸಿಎಂ
ಬೆಂಗಳೂರು, ಬುಧವಾರ, 13 ಏಪ್ರಿಲ್ 2011( 18:03 IST )
ಸಂಪುಟ ವಿಸ್ತರಣೆ ಎಂಬ ಮಾತು ಕೇಳಿದಾಕ್ಷಣ ಬಿಜೆಪಿಯಲ್ಲಿ ಆಗಾಗ್ಗೆ ಹೊತ್ತಿಕೊಳ್ಳುವ ಭಿನ್ನಮತದ ಕಿಡಿ, ಈ ಬಾರಿಯೂ ಹೊತ್ತಿಕೊಂಡಿದ್ದು, ಶಾಸಕರಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೆ ಸ್ಪಷ್ಟಪಡಿಸಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಶಾಸಕರಲ್ಲಿ ಅಸಮಧಾನವಿದೆ ಎಂದು ಹೇಳಿದ್ದರು. ಅದನ್ನು ನಾನು ಒಪ್ಪುವುದಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಬಿಜೆಪಿಯ ಕೇಂದ್ರೀಯ ವೀಕ್ಷಕ ಧರ್ಮೇಂದ್ರ ಪ್ರಧಾನ್ ಅವರು ಬೆಂಗಳೂರಿಗೆ ಬುಧವಾರ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸ್ಪಷ್ಟಪಡಿಸಿದರು.
ಈಶ್ವರಪ್ಪ ಅವರದು ವೈಯಕ್ತಿಕ ಅಭಿಪ್ರಾಯವಷ್ಟೇ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದ ಅವರು, ಧರ್ಮೇಂದ್ರ ಪ್ರಧಾನ್ ಬರುತ್ತಿರುವುದು ಭಿನ್ನಮತದ ಕುರಿತು ಚರ್ಚೆಗಲ್ಲ. ಇತ್ತೀಚೆಗೆ ನಡೆದ ಉಪಚುನಾವಣೆಗಳ ಕುರಿತಾಗಿ ಚರ್ಚಿಸಲು ಎಂದು ಹೇಳಿದರು.
ಈ ನಡುವೆ, ಹುಬ್ಬಳ್ಳಿ ಆರೆಸ್ಸೆಸ್ ಕಚೇರಿಗೆ ಬುಧವಾರ ಈಶ್ವರಪ್ಪ ಭೇಟಿ ನೀಡಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.