ಬಿಜೆಪಿ ಪಕ್ಷದಲ್ಲಿ ಅಸಮಧಾನ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಂಭಾಪುರಿ ಶ್ರೀಗಳೊಂದಿಗೆ ರಹಸ್ಯ ಚರ್ಚೆಯಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಗರದ ಹೊರಭಾಗದಲ್ಲಿರುವ ರಂಭಾಪುರಿ ಪೀಠದ ಆಶ್ರಮಕ್ಕೆ ಆಗಮಿಸಿದ ಸಿಎಂ, ರಾಜ್ಯ ರಾಜಕೀಯದ ವಿದ್ಯಮಾನಗಳ ಕುರಿತಂತೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ವಿರುದ್ಧ ಗುಪ್ತವಾಗಿ ಸೆಡ್ಡು ಹೊಡೆದು ಬಂಡಾಯದ ಬಾವುಟ ಹಾರಿಸಿರುವ ಪಕ್ಷದ ಅದ್ಯಕ್ಷ ಈಶ್ವರಪ್ಪ ಕೂಡಾ ಸಮಾರಂಭವೊಂದರಲ್ಲಿ ಮುಖ್ಯಮಂತ್ರಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಪಕ್ಷದ ಮುಖಂಡರು ಅಪಸ್ವರ ಎತ್ತಿದ್ದಾರೆ ಎಂದು ಭಿನ್ನರ ಗುಂಪು ಅಸಮಧಾನ ವ್ಯಕ್ತಪಡಿಸಿದೆ.
ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಇಬ್ಬರು ನಾಯಕರು ಹಾವು ಮುಂಗುಸಿಯಂತೆ ಮುನಿಸಿಕೊಂಡಿದ್ದರೂ,ತಮ್ಮ ನಡುವೆ ಭಿನ್ನಾಭಿಪ್ರಾಯವಿಲ್ಲ ಎನ್ನುವಂತೆ ವರ್ತಿಸುತ್ತಿರುವುದು ಅಚ್ಚರಿಗೆ ಕಾರಣವಾಯಿತು.