ಸತ್ಯ ಸಾಯಿಬಾಬಾ ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ಧಾರ್ಮಿಕ ನಾಯಕ ಸತ್ಯ ಸಾಯಿಬಾಬಾ ಸಜೀವ ಸಮಾಧಿಯನ್ನು ಪ್ರವೇಶಿಸಿದ್ದಾರೆ ಎಂದು ಘೋಷಿಸಲು ಸಾಯಿ ಟ್ರಸ್ಟ್ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
86 ವರ್ಷ ವಯಸ್ಸಿನ ದೇವಮಾನವ ಸಾಯಿಬಾಬಾ, ಕಳೆದ ಮಾರ್ಚ್ 28ರಿಂದ ಅನಾರೋಗ್ಯದಿಂದ ಬಳಲುತ್ತಿದ್ದು ದೇಶ ವಿದೇಶಗಳಲ್ಲಿ ಲಕ್ಷಾಂತರ ಜನತೆಯ ಭಕ್ತ ಸಮೂಹವನ್ನು ಹೊಂದಿದ್ದಾರೆ
ಶ್ರೀ ಸತ್ಯ ಸಾಯಿ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಮೆಡಿಕಲ್ ಸೈನ್ಸೆಸ್ ಆಸ್ಪತ್ರೆಯಲ್ಲಿ ಬಾಬಾ ದಾಖಲಾಗಿದ್ದು, ಆಸ್ಪತ್ರೆಯ ಮುಂದೆ ಸಾವಿರಾರು ಭಕ್ತರು ಬಾಬಾ ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಬಹು ಅಂಗಗಳ ವೈಫಲ್ಯದಿಂದ ಬಳಲುತ್ತಿರುವ ಬಾಬಾ, ಬದುಕುವ ಸಾಧ್ಯತೆಗಳು ತೀರಾ ಕಡಿಮೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಸಾಯಿಬಾಬಾ ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ನ ಸದಸ್ಯರು ತುರ್ತು ಸಭೆ ಕರೆದು ಜೀವಂತ ಸಮಾಧಿ ಕುರಿತಂತೆ ಚರ್ಚಿಸಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ. ಒಬ್ಬ ವ್ಯಕ್ತಿ ಜೀವಂತವಾಗಿದ್ದಾಗಲೇ ಸಮಾಧಿ ಮಾಡುವುದನ್ನು ಸಜೀವ ಸಮಾಧಿ ಎಂದು ಕರೆಯಲಾಗುತ್ತದೆ.
ಮಹತ್ವದ ಸಂಗತಿಯೆಂದರೆ, ಸತ್ಯ ಸಾಯಿಬಾಬಾ ಸಹೋದರ ಪುತ್ರ ರತ್ನಾಕರ ಮತ್ತು ಟ್ರಸ್ಟ್ ಸದಸ್ಯ ಹಾಗೂ ವ್ಯವಸ್ಥಾಪನಾ ಸಮಿತಿಯ ಮಧ್ಯೆ ಉಂಟಾದ ಭಿನ್ನಾಭಿಪ್ರಾಯಗಳು ತಾರಕಕ್ಕೇರಿದ್ದವು ಎನ್ನುತ್ತವೆ ಆಶ್ರಮದ ಮೂಲಗಳು.
ಸಾಯಿಬಾಬಾ ಭಕ್ತರ ಸಂಘದ ಅಧ್ಯಕ್ಷರಾದ ಧನಂಜಯ್ ಮಾತನಾಡಿ, ಬಾಬಾ ಅವರಿಗೆ ಹೃದಯಾಘಾತವಾದ ಕೂಡಲೇ ಏಕೆ ಆಸ್ಪತ್ರೆಗೆ ಕರೆದೊಯ್ಯಲಿಲ್ಲ. ಬಾಬಾ ಅವರ ಆರೋಗ್ಯದ ಬಗ್ಗೆ ಟ್ರಸ್ಟ್ ಹಲವು ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ ಯಾವುದೇ ಉತ್ತರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ನ ಸದಸ್ಯರು ಟನ್ಗಟ್ಟಲೆ ಚಿನ್ನಾಭರಣಗಳನ್ನು ಕೊಳ್ಳೆ ಹೊಡೆಯುತ್ತಿರುವಾಗ ಅದನ್ನು ತಡೆದು ತನಿಖೆ ನಡೆಸುವುದನ್ನು ಕೈಬಿಟ್ಟು ಅವರಿಗೆ ಶಸ್ತ್ರಾಸ್ತ್ರಧಾರಿಗಳ ರಕ್ಷಣೆ ಏಕೆ ನೀಡಲಾಗುತ್ತದೆ ಎಂದು ಧನಂಜಯ್ ಕಿಡಿಕಾರಿದ್ದಾರೆ.