ಏ.5ಕ್ಕೆ ಶವಪೆಟ್ಟಿಗೆಗೆ ಆರ್ಡರ್: ಬಾಬಾ ಸಾವು ಮೊದಲೇ ಆಗಿತ್ತೇ?
ಬೆಂಗಳೂರು, ಬುಧವಾರ, 27 ಏಪ್ರಿಲ್ 2011( 15:54 IST )
PTI
ಸಾಯಿ ಬಾಬಾ ಅವರ ಹೇಗಿದ್ದಾರೆ ಎಂದು ನಮಗೆ ಖಚಿತ ಮಾಹಿತಿ ನೀಡುತ್ತಿಲ್ಲ ಎಂಬ ಭಕ್ತರ ಕೂಗು, ಪ್ರತಿಭಟನೆ ನೆನಪಿದೆಯೇ? ಸಾಯಿ ಬಾಬಾ ಅವರ ಮರಣ ಯಾವತ್ತೋ ಸಂಭವಿಸಿದೆ ಎಂಬ ಕುರಿತು ಊಹಾಪೋಹಗಳನ್ನು ಕೇಳಿದ್ದೀರೇ? ಹಾಗಿದ್ದರೆ, ಇಲ್ಲೊಂದು ಮಾಹಿತಿಯಿದೆ. ಸಾಯಿ ಬಾಬಾ ಅವರ ಶವ ಪೆಟ್ಟಿಗೆಗಾಗಿ ಎರಡು ತಿಂಗಳ ಹಿಂದೆಯೇ ಆರ್ಡರ್ ಮಾಡಲಾಗಿತ್ತು ಮತ್ತು ಅದನ್ನು ಏ.5ರಂದೇ ಪುಟ್ಟಪರ್ತಿಗೆ ಒಯ್ಯಲಾಗಿತ್ತು!
ಹೀಗಂತೆ ಈಗ, ಇಷ್ಟು ತಡವಾಗಿ ಹೇಳಿದವರು ಅರಸೀಕೆರೆಯ ಕಾಳಿಕಾಶ್ರಮದ ಶ್ರೀ ಯೋಗೇಶ್ವರ ಋಷಿಕುಮಾರ ಸ್ವಾಮೀಜಿ. ಈ ಬಗ್ಗೆ ಅವರಲ್ಲಿ ಇಮೇಲ್, ಟೆಲಿಫೋನ್ ಮಾತುಕತೆಯ ಸಾಕ್ಷ್ಯಾಧಾರಗಳೂ ಇವೆ ಎಂದು ಹೇಳಿದ್ದಾರೆ ಅವರು.
2 ತಿಂಗಳ ಹಿಂದೆಯೇ ಕೊಯಮತ್ತೂರಿನ ಕುಮಾರ್ ಎಂಡ್ ಕಂಪನಿಗೆ ಶವ ಪೆಟ್ಟಿಗೆಗಾಗಿ ಆರ್ಡರ್ ಬಂದಿತ್ತು. ಇಮೇಲ್ ಮತ್ತು ದೂರವಾಣಿ ಮೂಲಕವೂ ಸಂಭಾಷಣೆಗಳು ನಡೆದಿದ್ದವು. ಆದರೆ ಆರ್ಡರ್ ಕೊಟ್ಟವರು ಯಾರು, ತೆಗೆದುಕೊಂಡು ಹೋದವರು ಯಾರು ಎಂಬುದನ್ನೆಲ್ಲಾ ಅವರು ಬಹಿರಂಗಪಡಿಸಿಲ್ಲ.
57 ಸಾವಿರ ರೂಪಾಯಿ ಕೊಟ್ಟು ಇದನ್ನು ಖರೀದಿಸಲಾಗಿದ್ದು, ಅದರ ರಶೀದಿಯೂ ಇದೆ ಎಂದಿದ್ದಾರೆ ಈ ಸ್ವಾಮೀಜಿ. ಅದೂ ಅಲ್ಲದೆ, ಸಾಯಿ ಬಾಬಾ ಅವರನ್ನು ಅಂತಿಮ ದರ್ಶನಕ್ಕಾಗಿ ಇರಿಸಲಾಗಿದ್ದ ಶವ ಪೆಟ್ಟಿಗೆಯು ವಿಐಪಿಗಳಿಗೆ ಮಾತ್ರ ಕೊಡುವಂಥಾದ್ದು, ಇದಕ್ಕೆ ರಾಜ್ಕುಮಾರ್ ಬಾಕ್ಸ್ ಅಂತಾನೇ ಕರೀತೀವಿ ಅಂತಲೂ ಸ್ಪಷ್ಟಪಡಿಸಿದ್ದಾರೆ ಕುಮಾರ್ ಎಂಡ್ ಕಂಪನಿಯ ಮಾಲಕಿ ಲಕ್ಷ್ಮೀ.
40 ಸಾವಿರ ಕೋಟಿ ರೂಪಾಯಿಯ ಆಸ್ತಿ ಹೊಂದಿರುವ ಸಾಯಿ ಬಾಬಾ ಅವರ ಸಾವಿನ ಸುತ್ತ ಶಂಕೆಗಳು ಇನ್ನೂ ಮರೆಯಾಗಿಲ್ಲ. ಮಾರ್ಚ್ 28ರಂದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ, ಆ ಬಳಿಕ ಏನಾಯಿತು ಎಂಬುದು ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ. ಅವರ ಪರಿಸ್ಥಿತಿಯ ಕುರಿತು ಭಕ್ತಾದಿಗಳಿಗೆ ಸಂದೇಹ ಬಂದು, ಅವರು ಸಾಯಿ ಬಾಬಾ ಇದ್ದ ಆಸ್ಪತ್ರೆಯೆದುರು ಭಾರೀ ಪ್ರತಿಭಟನೆಯನ್ನೂ ನಡೆಸಿದ್ದನ್ನು ನಾವು ಕೇಳಿದ್ದೇವೆ, ನೋಡಿದ್ದೇವೆ.
ಇಂಥದ್ದರಲ್ಲಿ, ಸಾಯಿ ಬಾಬಾ ಸಾವಿನ ಕುರಿತು ಸಿಬಿಐ ತನಿಖೆಯಾಗಲಿ ಎಂದು ಆಗ್ರಹಿಸುತ್ತಿದ್ದಾರೆ ಈ ಸ್ವಾಮೀಜಿ.