ನಿಲ್ಸಿ ನಿಮ್ಮ ರಾಜಕೀಯ ಭಾಷಣ: ಎಚ್ಡಿಕೆ v/s ಒಕ್ಕಲಿಗ ಸಂಘ
ಬೆಂಗಳೂರು, ಶನಿವಾರ, 28 ಮೇ 2011( 20:45 IST )
WD
ಇದು ರಾಜಕೀಯದ ವೇದಿಕೆ ಅಲ್ಲ, ನಿಮ್ಮ ರಾಜಕೀಯ ಭಾಷಣ ಬೇಕಾಗಿಲ್ಲ. ಜನಾಂಗದ ಬಗ್ಗೆ ಮಾತನಾಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರ ಭಾಷಣಕ್ಕೆ ಅಡ್ಡಿಪಡಿಸಿದ್ದರಿಂದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದ ಘಟನೆ ಶನಿವಾರ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲದಲ್ಲಿ ಒಕ್ಕಲಿಗರ ಸಂಘದಿಂದ ಏರ್ಪಡಿಸಿದ್ದ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗಮಿಸಿದ್ದರು. ತಮ್ಮ ಭಾಷಣದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಿಜೆಪಿ ಒಕ್ಕಲಿಗ ಜನಾಂಗದ ಉದ್ದಾರಕ್ಕೆ ಏನೂ ಮಾಡಿಲ್ಲ. ಆದರೆ ಒಕ್ಕಲಿಗ ಜನಾಂಗವನ್ನು ತಮ್ಮ ಸುಪರ್ದಿಗೆ ಪಡೆಯಲು ಬಿಜೆಪಿ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದ್ದರು.
ಈ ಸಂದರ್ಭದಲ್ಲಿ ಗೃಹಸಚಿವ ಆರ್.ಅಶೋಕ್ ಅವರ ಬಿಜೆಪಿ ಬೆಂಬಲಿಗರು ಎದ್ದು ನಿಂತು ಕುಮಾರಸ್ವಾಮಿ ಭಾಷಣಕ್ಕೆ ಅಡ್ಡಿಪಡಿಸಿ, ಇದು ರಾಜಕೀಯ ವೇದಿಕೆ ಅಲ್ಲ. ನೀವು ಮೊದಲು ಜನಾಂಗದ ಬಗ್ಗೆ ಮಾತನಾಡಿ ಎಂದು ತಾಕೀತು ಮಾಡಿದ್ದರು. ಆಗ ತಾಳ್ಮೆಕಳೆದುಕೊಂಡ ಕುಮಾರಸ್ವಾಮಿ ಅದನ್ನು ಕೇಳಲು ನೀವ್ಯಾರು ಎಂದು ಪ್ರಶ್ನಿಸಿದರು. ಆಗ ವೇದಿಕೆ ಕೆಳಭಾಗದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿತ್ತು. ಕೈ-ಕೈ ಮಿಲಾಯಿಸುವ ಹಂತಕ್ಕೂ ತಲುಪಿ ಸಮಾವೇಶ ಗೊಂದಲದ ಗೂಡಾಯಿತು. ಆಗ ವೇದಿಕೆಯಲ್ಲಿದ್ದ ಇತರ ಗಣ್ಯರು ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು.
ರಾಜಕೀಯ ಮತ್ತು ಜನಾಂಗದ ಜಟಾಪಟಿ ಜಗಳಕ್ಕೆ ಎಡೆಮಾಡಿಕೊಟ್ಟಿತು. ಇದರಿಂದ ಅಸಮಾಧಾನಗೊಂಡ ಕೆಲವು ಗಣ್ಯರು ವೇದಿಕೆಯಿಂದ ನಿರ್ಗಮಿಸಿದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿಯವರೂ ತಮ್ಮ ಭಾಷಣ ಮುಗಿಸಿ ತೆರಳಿದರು.
ಟಿವಿ9 ಪ್ರತಿನಿಧಿಗೆ ಜೀವಬೆದರಿಕೆ: ಕುಮಾರಸ್ವಾಮಿಯವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿರುವ ಘಟನೆಯ ಚಿತ್ರೀಕರಣ ಮಾಡಿದ ಟಿವಿ9 ಪ್ರತಿನಿಧಿಗೆ ನೆಲಮಂಗಲದ ಒಕ್ಕಲಿಗ ಸಂಘದ ಅಧ್ಯಕ್ಷ ಬಾಬು ಎಂಬವರು ಜೀವಬೆದರಿಕೆ ಒಡ್ಡಿರುವ ಘಟನೆ ನಡೆದಿದೆ. ಕಾರ್ಯಕ್ರಮದ ಚಿತ್ರೀಕರಣ ಮಾಡಿಕೊಂಡಿದ್ದ ಕ್ಯಾಸೆಟ್ ಕಸಿಯಲು ಯತ್ನಿಸಿ, ಹಲ್ಲೆ ನಡೆಸಲು ಪ್ರಯತ್ನಿಸಿರುವುದಾಗಿ ಟಿವಿ9 ಪ್ರತಿನಿಧಿ ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ನೆಲಮಂಗಲ ಪೊಲೀಸರು ಮಧ್ಯಪ್ರವೇಶಿಸಿ ಆತನಿಗೆ ರಕ್ಷಣೆ ನೀಡಿದ್ದಾರೆ.