ಅಕ್ರಮ ಗಣಿಗಾರಿಕೆಯ ಲೋಕಾಯುಕ್ತರ ವರದಿಯಲ್ಲಿ ತಮ್ಮ ಹೆಸರಿದ್ದರೂ ಕೂಡ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಗಾದಿಗೆ ರಾಜೀನಾಮೆ ಕೊಡಲಾರೆ ಎಂದು ಪಟ್ಟುಹಿಡಿದಿರುವ ಬಿ.ಎಸ್.ಯಡಿಯೂರಪ್ಪ ಇದೀಗ ನನ್ನ ವಿರುದ್ಧದ ಆರೋಪಗಳಿಗೆ ಕಿಂಚಿತ್ತೂ ದಾಖಲೆಗಳು ಇಲ್ಲ ಎಂದಿದ್ದು, ಮುಂದಿನ ಎರಡು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.
ಆರು ದಿನಗಳ ಕಾಲ ಕುಟುಂಬ ಸದಸ್ಯರೊಂದಿಗಿನ ಮಾರಿಷಸ್ ಪ್ರವಾಸ ಮುಗಿಸಿ ನಗರಕ್ಕೆ ವಾಪಸ್ ನಂತರ ಮುಖ್ಯಮಂತ್ರಿಗಳು ಆಪ್ತರೊಡನೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡುತ್ತ, ನೋಡ್ರಿ ಬಿಜೆಪಿಯಲ್ಲಿ ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಬಿಜೆಪಿ ವರಿಷ್ಠರನ್ನು ನಾನು ಸಂಭಾಳಿಸುತ್ತೇನೆ. ಅಲ್ಲದೇ ಅವರಿಗೆ ಈ ಬಗ್ಗೆ ಎಲ್ಲ ವಿವರ ನೀಡುವುದಾಗಿ ಹೇಳಿದರು.
ಲೋಕಾಯುಕ್ತರ ವರದಿಯ ಕೆಲ ಭಾಗ ಸೋರಿಕೆಯಾಗಿದ್ದು, ಅದರಲ್ಲಿ ತಮ್ಮ ಹೆಸರು ಇರುವುದು ಬಹಿರಂಗವಾದ ಮೇಲೆ ಇದೇ ಮೊದಲ ಬಾರಿಗೆ ಯಡಿಯೂರಪ್ಪ ಮೌನ ಮುರಿದಿದ್ದಾರೆ. ಅಲ್ಲದೇ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವ ಮೊದಲೇ ಬಹಿರಂಗ ಹೇಳಿಕೆ ನೀಡುವ ಲೋಕಾಯುಕ್ತರ ಮೇಲೂ ಅಸಮಾಧಾನ ಹೊರಹಾಕಿದ್ದಾರೆ.
ಪ್ರತಿಪಕ್ಷಗಳ ಆರೋಪ ನಂಬಿಕೊಂಡು ರಾಜೀನಾಮೆ ಕೊಡಲಾರೆ. ದಿನದಿಂದ ದಿನಕ್ಕೆ ವಿಶ್ವಾಸ ಕಳೆದುಕೊಳ್ಳುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿಯೇ ಹೆಚ್ಚಿನ ಚಿಂತೆಗೆ ಒಳಗಾಗಿದ್ದಾರೆ. ನಮಗೆ ಯಾವುದೇ ಆತಂಕ ಇಲ್ಲ ಎಂದು ತಿರುಗೇಟು ನೀಡಿದರು.
ನಾನು ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾಗಿಲ್ಲ. ಈ ವಿಚಾರದಲ್ಲಿ ನನ್ನ ವಿರುದ್ಧ ಯಾವುದೇ ದಾಖಲೆಗಳಿಲ್ಲ. ಹೀಗಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಪ್ರಶ್ನೆಯೇ ಇಲ್ಲ. ಬಿಜೆಪಿ ನನ್ನ ಜತೆಗಿದೆ ಎಂದೂ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಅಕ್ರಮ ಗಣಿಗಾರಿಕೆ ಕುರಿತ ವರದಿ ಸೋರಿಕೆಯಾಗಲು ತಮ್ಮ ದೂರವಾಣಿ ಕದ್ದಾಲಿಕೆಯೇ ಕಾರಣ ಎಂದು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಬಹಿರಂಗವಾಗಿ ಆರೋಪಿಸಿದ್ದರು. ಈ ಹೇಳಿಕೆಯಿಂದ ತಮಗೆ ನೋವಾಗಿದೆ ಎಂದು ಹೇಳಿರುವ ಯಡಿಯೂರಪ್ಪ, ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವ ಮೊದಲೇ ಆ ಬಗ್ಗೆ ನ್ಯಾ.ಹೆಗ್ಡೆ ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದರು.