ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆದಿರುವ ಸಭೆಗೆ ಶಾಸಕರು, ಸಚಿವರು ಹಾಜರಾದಲ್ಲಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎನ್ನುವ ಹೈಕಮಾಂಡ್ ಆದೇಶವನ್ನು ಯಡಿಯೂರಪ್ಪ ಧಿಕ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಯಾವುದೇ ರೀತಿಯ ಸಭೆ ನಡೆಸದಂತೆ ಹೈಕಮಾಂಡ್ ಎಚ್ಚರಿಕೆ ನೀಡಿತ್ತು. ಆದರೆ, ಹೈಕಮಾಂಡ್ ಆದೇಶವನ್ನು ಧಿಕ್ಕರಿಸಿ ಸಭೆ ನಡೆಸಲು ಸಿಎಂ ನಿರ್ಧರಿಸಿದ ಕ್ರಮದಿಂದ ಕೋಲಾಹಲ ಸೃಷ್ಟಿಯಾಗಿದೆ.
ಆಪ್ತರಾದ ಸಚಿವ ರೇಣುಕಾಚಾರ್ಯ, ಸಿ.ಎಂ.ಉದಾಸಿ, ಜೀವರಾಜ್, ಕಟ್ಟಾ ಸುಬ್ರಮಣ್ಯಂ ನಾಯ್ಡು, ರೇವುನಾಯಕ್ ಅವರೊಂದಿಗೆ ಸಭೆ ನಡೆಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಭೆಯನ್ನು ಕರೆದಿದ್ದು, ಸಭೆಯಲ್ಲಿ ಕೆಲವೇ ಆಪ್ತ ಸಚಿವ ಶಾಸಕರು ಭಾಗವಹಿಸುವ ನಿರೀಕ್ಷೆಗಳಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಹೈಕಮಾಂಡ್ ರಾಜ್ಯದ ಉಸ್ತುವಾರಿಯನ್ನು ಹೊತ್ತಿರುವ ಧರ್ಮೇಂದ್ರ ಪ್ರಧಾನ್ ಅವರನ್ನು ಬೆಂಗಳೂರಿಗೆ ರವಾನಿಸಿದ್ದು, ಹೈಕಮಂಡ್ ಆದೇಶ ಉಲ್ಲಂಘಿಸಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದೆ.
ಸಿಎಂ ಸಭೆಗೆ ಯಾರೂ ಹೋಗಬಾರದು
ರಾಷ್ಟ್ರೀಯ ವರಿಷ್ಠರು ಮುಖ್ಯಮಂತ್ರಿ ಯಡಿಯೂರಪ್ಪ ಕರೆದಿರುವ ಸಭೆಗೆ ಸಚಿವರು, ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳು ಹಾಜರಾಗಬಾರದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರಿಗೆ ಮಾಹಿತಿ ರವಾನಿಸಿದೆ ಎನ್ನಲಾಗಿದೆ.
ಸಿಎಂ ಯಡಿಯೂರಪ್ಪ ಕರೆದಿರುವ ಸಭೆಗೆ ಸಚಿವರು ,ಶಾಸಕರು ಮತ್ತು ಜಿಲ್ಲಾಧ್ಯಕ್ಷರು ಹೋಗದಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸೂಚನೆ ನೀಡಿದ್ದಾರೆ.