ಬಿಜೆಪಿ ಪಕ್ಷ ಅಶಿಸ್ತಿನ ಪಕ್ಷ ಎನ್ನವುದಕ್ಕೆ ಅಲ್ಲಿ ಹೈಕಮಾಂಡ್ ಹೇಳಿದ ಮಾತಿಗೆ ಸರಿಯಾದ ಬೆಲೆ ಇಲ್ಲ ಎನ್ನುವುದಕ್ಕೆ ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಲ್ಲಿ ತಿಳಿದು ಬರುವ ಸತ್ಯವಾಗಿದೆ ಎಂದು ಮಾಜಿ ಸಚಿವ ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಕೆ.ಪಾಟೀಲ್ ಹೇಳಿದರು.
ಅವರು ಗದಗ ನಗರದ ಶಾದಿಮಹಲ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ವಿಶ್ವಾಸವನ್ನು ಹೊಂದಿದ್ದ ರಾಜ್ಯದ ಪ್ರತಿಯೊಬ್ಬ ಜನತೆಯಲ್ಲೂ ಈ ಬೆಳವಣಿಗೆ ಹಾಗೂ ಮುಖ್ಯಮಂತ್ರಿಗಳ ವರ್ತನೆಯಿಂದ ಆಘಾತವಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ ರಾಜಕೀಯ ಪ್ರಹಸನದಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಆರೋಪಿಸಿದರು.
ಸಂವಿಧಾನ ಬದ್ಧವಾದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿ, ಬಿಜೆಪಿ ಅಧಿಕಾರದ ಆಸೆಯಿಂದ ಆಪರೇಷನ್ ಕಮಲ ನಡೆಸಿತು.ಇತ್ತೀಚೆಗೆ ನಡೆದ ಪ್ರತಿಯೊಂದು ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಿದ್ದೇವೆ. ಇದು ರಾಜ್ಯದ ಅಭಿವೃದ್ಧಿ ಗಮನಿಸಿ ಜನರು ಚುನಾವಣೆಯಲ್ಲಿ ಗೆಲ್ಲಿಸಿದ್ದಲ್ಲ. ಈ ಗೆಲುವಿನ ಹಿಂದೆ ಹಣ ಮತ್ತು ಅಧಿಕಾರದ ದುರ್ಬಳಕೆಯೇ ಪ್ರಮುಖ ಕಾರಣವಾಗಿದೆ ಎಂದರು.
ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ ಎಂಬುದಕ್ಕೆ ಇತ್ತೀಚೆಗಿನ ರಾಜಕೀಯ ಬೆಳವಣಿಗೆಯೇ ಸಾಕ್ಷಿ. ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿರುವುದಾಗಿ ಪಾಟೀಲ್ ದೂರಿದರು.