ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಶೀಘ್ರವೇ ಪರಿಹಾರವಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿರುವ ನೂತನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ನಗು, ವಿಶ್ವಾಸ ಮತ್ತು ನಂಬಿಕೆ ಎಲ್ಲಾ ಸಮಸ್ಯೆಗೆ ಪರಿಹಾರ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಗುರುವಾರ ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯದ 26ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ವಿಧಾನಸೌಧದಲ್ಲಿ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಸರ್ವೋತೋಮುಖ ಅಭಿವೃದ್ಧಿ ಹೆಚ್ಚಿನ ಒತ್ತು ಕೊಡುವುದಾಗಿ ಹೇಳಿದರು.
ಸ್ನೇಹಪೂರ್ವಕ ನಡವಳಿಕೆಯಿಂದ ಆಡಳಿತ ನಡೆಸುವುದಾಗಿ ವಿಶ್ವಾಸವ್ಯಕ್ತಡಿಸಿದ ಡಿವಿ, ಪಕ್ಷದ ಹಿರಿಯ ಮುಖಂಡರು, ಶಾಸಕರು, ಕಾರ್ಯಕರ್ತರು ಹಾಗೂ ರಾಜ್ಯದ ಜನತೆಗೆ ಚಿರಋಣಿ ಎಂದರು. ಅಲ್ಲದೇ ಸುಗಮ ಆಡಳಿತಕ್ಕಾಗಿ ಮಾಧ್ಯಮ ಮತ್ತು ಪ್ರತಿಪಕ್ಷಗಳ ಸಹಕಾರವನ್ನೂ ಈ ಸಂದರ್ಭದಲ್ಲಿ ಕೋರಿದರು. ಇತಿಹಾಸದಲ್ಲಿ ಸಂಘರ್ಷವಿಲ್ಲದ ರಾಜನೀತಿ ಇಲ್ಲ ಎಂದು ಹೇಳುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.
ರಾಜ್ಯವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವುದಾಗಿ ಹೇಳಿದ ಮುಖ್ಯಮಂತ್ರಿಗಳು ರಾಜ್ಯ ಒಪ್ಪುವ ಸಂಪುಟ ರಚಿಸುತ್ತೇನೆ ಎಂದರು. ಆದರೆ ಪಕ್ಷದೊಳಗಿನ ಬಿಕ್ಕಟ್ಟು, ಅಸಮಾಧಾನ ಕುರಿತ ಪ್ರಶ್ನೆಗೆ ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ ಎಂದು ಹೇಳಿದರು.