ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 21 ಸಚಿವರು ಪ್ರಮಾಣವಚನ ಸ್ವೀಕಾರ: ಯಾರೆಲ್ಲಾ ಮಂತ್ರಿ ಗೊತ್ತಾ? (Jagadish Shettar | Sadananda Gowda | New cabinet | BJP | Yeddyurappa | Hicommond)
21 ಸಚಿವರು ಪ್ರಮಾಣವಚನ ಸ್ವೀಕಾರ: ಯಾರೆಲ್ಲಾ ಮಂತ್ರಿ ಗೊತ್ತಾ?
ಬೆಂಗಳೂರು, ಸೋಮವಾರ, 8 ಆಗಸ್ಟ್ 2011( 20:27 IST )
ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಡಿಸಿಎಂ ಹುದ್ದೆ ಸೃಷ್ಟಿಸುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶ ರವಾನಿಸುವ ಮೂಲಕ ಶೆಟ್ಟರ್ ತಮ್ಮ ಪಟ್ಟನ್ನು ಸಡಿಲಿಸಿದ್ದು, ಯಡಿಯೂರಪ್ಪ ಬಣದ 12 ಹಾಗೂ ಜಗದೀಶ್ ಶೆಟ್ಟರ್ ಬಣದ 9 ಮಂದಿ ಸೋಮವಾರ ಸಂಜೆ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ರಾಜ್ಯದಲ್ಲಿ ಎರಡಲ್ಲ ಒಂದು ಡಿಸಿಎಂ ಹುದ್ದೆಯನ್ನೂ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಹೈಕಮಾಂಡ್ ಸೂಚಿಸಿದೆ. ಉಪಮುಖ್ಯಮಂತ್ರಿ ಹುದ್ದೆ ರಚನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಹೈಕಮಾಂಡ್ ನಿಲುವಿನಿಂದ ಡಿಸಿಎಂ ಪ್ರಬಲ ಆಕಾಂಕ್ಷಿ ಜಗದೀಶ್ ಶೆಟ್ಟರ್ ಕೊನೆಗೂ ತಮ್ಮ ಪಟ್ಟನ್ನು ಸಡಿಲಿಸಿ ಸಂಧಾನಕ್ಕೆ ಒಪ್ಪಿದ್ದಾರೆನ್ನಲಾಗಿದೆ.
ಏತನ್ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ನೂತನ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್ ಮಾಡಲಾಗಿತ್ತು. ಯಡಿಯೂರಪ್ಪ ಬಣದ 12 ಹಾಗೂ ಶೆಟ್ಟರ್ ಬಣದ 9 ಮಂದಿ ಸಚಿವರಾಗಿ ಮೊದಲ ಹಂತದಲ್ಲಿ ಪ್ರಮಾಣ ವಚನ ಸ್ವೀಕರಿಸಲು ವೇದಿಕೆ ಸಿದ್ದ ಮಾಡಿತ್ತು. ಆದರೆ ನೂತನ ಸಂಪುಟದಲ್ಲಿ ಅಕ್ರಮ ಗಣಿ ಹಗರಣದ ವರದಿಯಲ್ಲಿ ವಿ.ಸೋಮಣ್ಣ ಅವರ ಹೆಸರು ಉಲ್ಲೇಖವಾಗಿದ್ದರೂ ಕೂಡ ಅವರಿಗೆ ಮತ್ತೆ ಮಣೆ ಹಾಕಲಾಗಿದೆ. ಬಿಜೆಪಿಯ ಪವರ್ ಫುಲ್ ಮುಖಂಡರೆನಿಸಿಕೊಂಡಿದ್ದ ಬಳ್ಳಾರಿಯ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಸಚಿವಸ್ಥಾನದ ಪಟ್ಟಿಯಿಂದ ಹೊರಗುಳಿದಿದ್ದಾರೆ.
ಯಡಿಯೂರಪ್ಪ -ಶೆಟ್ಟರ್ ಬಣದಿಂದ ಪ್ರಮಾಣವಚನ ಸ್ವೀಕಾರ: ವಿ.ಎಸ್.ಆಚಾರ್ಯ, ಶೋಭಾ ಕರಂದ್ಲಾಜೆ, ಸಿ.ಎಂ.ಉದಾಸಿ, ಮುರುಗೇಶ್ ನಿರಾಣಿ, ಬಸವರಾಜ್ ಬೊಮ್ಮಾಯಿ, ಎಂ.ಪಿ.ರೇಣುಕಾಚಾರ್ಯ(ಯಡಿಯೂರಪ್ಪ ಹೆಸರಿನಲ್ಲಿ), ಉಮೇಶ್ ಕತ್ತಿ, ಸಿ.ಸಿ.ಪಾಟೀಲ್, ಲಕ್ಷ್ಮಣ್ ಸವದಿ, ರೇವೂ ನಾಯಕಿ ಬೆಳಮಗಿ, ಕೃಷ್ಣ.ಜೆ.ಪಾಲೇಮಾರ್, ವಿ.ಸೋಮಣ್ಣ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಜಗದೀಶ್ ಶೆಟ್ಟರ್ ಬಣದ: ಜಗದೀಶ್ ಶೆಟ್ಟರ್, ಆರ್.ಅಶೋಕ್, ಎಸ್.ಸುರೇಶ್ ಕುಮಾರ್, ಗೋವಿಂದ ಕಾರಜೋಳ, ಎಸ್.ಎ.ರವೀಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಕೆ.ಎನ್.ಬಚ್ಚೇಗೌಡ, ಎಸ್.ಎ.ರಾಮದಾಸ್, ಎ.ನಾರಾಯಣಸ್ವಾಮಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪ್ರತಿಜ್ಞಾ ವಿಧಿ ಬೋಧಿಸಿದರು.
ನಮಗೆ ಸಚಿವಪಟ್ಟ ಕೊಡದಿದ್ರೆ ಹುಷಾರ್-ಬಾಲಚಂದ್ರ ಜಾರಕಿಹೊಳಿ ನ್ಯಾಯಾಲಯದ ತೀರ್ಪಿನ ನಂತರ ನಾವೂ ಕೂಡ ಬಿಜೆಪಿ ಪಕ್ಷದವರೇ ಎಂಬುದು ಸಾಬೀತಾಗಿದೆ. ಈವರೆಗೂ ನಾವು ಪಕ್ಷದ ಜತೆಯೇ ಕೈಜೋಡಿಸಿದ್ದೇವೆ. ಹಾಗಾಗಿ ನಮಗೆ ಮೊದಲ ಹಂತದಲ್ಲಿಯೇ ಸಚಿವ ಸ್ಥಾನ ನೀಡದಿದ್ದರೆ, ಇನ್ಮುಂದೆ ಯಾವತ್ತೂ ಸಚಿವ ಸಂಪುಟಕ್ಕೆ ಸೇರುವುದಿಲ್ಲ. ನಾವು ಶಾಸಕರಾಗಿಯೇ ಉಳಿತ್ತೇವೆ ಎಂದು ಬಾಲಚಂದ್ರ ಜಾರಕಿಹೊಳಿ, ಆನಂದ್ ಅಸ್ನೋಟಿಕರ್ ಅಪಸ್ವರ ಎತ್ತುವ ಮೂಲಕ ಭಿನ್ನಮತ ಮುಂದುವರಿಯುವಂತಾಗಿದೆ.