ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಮನೆಗೆ ಬಂದ ಸದಾನಂದ ಗೌಡರ ಭೇಟಿಗೆ ಯಡಿಯೂರಪ್ಪ ನಕಾರ (Sadananda Gowda | Yeddyurappa | BJP | Shobha karandlaje | Karnataka News | Bangalore News,)
ಮನೆಗೆ ಬಂದ ಸದಾನಂದ ಗೌಡರ ಭೇಟಿಗೆ ಯಡಿಯೂರಪ್ಪ ನಕಾರ
ಬೆಂಗಳೂರು, ಗುರುವಾರ, 15 ಸೆಪ್ಟೆಂಬರ್ 2011( 11:53 IST )
ಹೈಕಮಾಂಡ್ ನನ್ನಿಂದ ಆತುರವಾಗಿ ರಾಜೀನಾಮೆ ಪಡೆದಿದೆ. ಹೈಕಮಾಂಡ್ ಎಲ್ಲದಕ್ಕೂ ಮೂಗು ತೂರಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ ಹಾಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ತಾನು ಒತ್ತಡದಲ್ಲಿ ಕೆಲಸ ಮಾಡುತ್ತಿರುವುದಾಗಿ ಮನದಾಳದ ಮಾತು ಹೊರಹಾಕಿದ್ದಾರೆ. ಏತನ್ಮಧ್ಯೆ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ಸಂಬಂಧ ಹಳಸಿರುವುದು ಬಯಲಿಗೆ ಬಂದಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಭೇಟಿಗಾಗಿ ಸದಾನಂದ ಗೌಡರು ಗಂಟೆಗಟ್ಟಲೆ ಕಾದ ಪ್ರಸಂಗ ಇತ್ತೀಚೆಗೆ ನಡೆದಿದೆ. ಮನೆಗೆ ಬಂದ ಮುಖ್ಯಮಂತ್ರಿಯನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ಕಾಯಿಸಿದ ಯಡಿಯೂರಪ್ಪ ಅವರು ನಂತರ ತಮ್ಮ ಮನೆಯವರು ಒತ್ತಡಕ್ಕೆ ಮಣಿದು ಭೇಟಿ ಮಾಡಿದರು ಎಂದು ಮೂಲವೊಂದು ತಿಳಿಸಿದೆ.
ಇಬ್ಬರ ನಡುವೆಯೂ ಕೆಲವೊಂದು ಭಿನ್ನಾಭಿಪ್ರಾಯ ತಲೆದೋರಿದ್ದು, ತಾನು ಹೇಳಿದ ಕೆಲಸ ಸಿಎಂ ಮಾಡುತ್ತಿಲ್ಲ ಎಂಬ ಆರೋಪ ಯಡಿಯೂರಪ್ಪನವರದ್ದಾಗಿದೆ.
ಸಚಿವರಾದ ಬಸವರಾಜ ಬೊಮ್ಮಾಯಿ ಮತ್ತು ಶೋಭಾ ಕರಂದ್ಲಾಜೆ ಅವರನ್ನು ಪಕ್ಷದ ಕೋರ್ ಕಮಿಟಿ ಸದಸ್ಯರನ್ನಾಗಿ ಮಾಡಬೇಕು. ಬೆಂಗಳೂರು ನಗರ ಅಥವಾ ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯನ್ನು ಶೋಭಾ ಅವರಿಗೆ ನೀಡಬೇಕು. ಸಚಿವ ಮುರುಗೇಶ್ ನಿರಾಣಿ ಅವರಿಗೆ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ನೀಡಬೇಕು. ಬೊಮ್ಮಾಯಿ ಅವರನ್ನು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು...ಇವು ಯಡಿಯೂರಪ್ಪನವರ ಸದ್ಯದ ಬೇಡಿಕೆಗಳು. ಆದರೆ ಈ ಬೇಡಿಕೆಗೆ ಸದಾನಂದ ಗೌಡರು ಸ್ಪಂದಿಸಿಲ್ಲ ಎಂಬ ಕಾರಣಕ್ಕೆ ಯಡಿಯೂರಪ್ಪ ಅಸಮಾಧಾನಗೊಂಡಿದ್ದಾರೆನ್ನಲಾಗಿದೆ.
ನನ್ನಿಂದ ಮುಖ್ಯಮಂತ್ರಿಯಾದ ನೀವು ನಾನು ಹೇಳಿದ ಕೆಲಸ ಏಕೆ ಮಾಡುತ್ತಿಲ್ಲ. ಹೀಗಾಗಿ ನಿಮ್ಮ ಜತೆ ಮಾತನಾಡುವುದಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿ, ಭೇಟಿಯಿಂದ ದೂರ ಉಳಿದಿದ್ದರು. ನಂತರ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರೇ ಯಡಿಯೂರಪ್ಪ ಅವರನ್ನು ಮನೆ ಮಹಡಿಯಿಂದ ಕರೆತಂದು ಸದಾನಂದ ಗೌಡ ಭೇಟಿ ಮಾಡಿಸಿದರು ಎನ್ನಲಾಗಿದೆ.