ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಅಕ್ರಮ ಗಣಿ; ಸಿಬಿಐ ಕಚೇರಿಯಲ್ಲಿ ಕರುಣಾಕರ ರೆಡ್ಡಿ ವಿಚಾರಣೆ
(Illigal mining | CBI | janardhan reddy | Karunakara reddy | Latest News in Kannada)
ಅಕ್ರಮ ಗಣಿ; ಸಿಬಿಐ ಕಚೇರಿಯಲ್ಲಿ ಕರುಣಾಕರ ರೆಡ್ಡಿ ವಿಚಾರಣೆ
ಹೈದರಾಬಾದ್, ಶುಕ್ರವಾರ, 16 ಸೆಪ್ಟೆಂಬರ್ 2011( 19:00 IST )
ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓಬಳಾಪುರಂ ಮೈನಿಂಗ್ ಕಂಪನಿ ಮಾಲೀಕ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಿ.ವಿ.ಶ್ರೀನಿವಾಸ ರೆಡ್ಡಿ ಅವರನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳ ಎದುರು ಈಗ ಜನಾರ್ದನ ರೆಡ್ಡಿ ಸಹೋದರ ಕರುಣಾಕರ ರೆಡ್ಡಿ ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದಾರೆ.
ಸೆಪ್ಟೆಂಬರ್ 16ರಂದು ವಿಚಾರಣೆಗೆ ಆಗಮಿಸುವಂತೆ ಸಿಬಿಐ ನೋಟಿಸ್ ಜಾರಿಗೊಳಿಸಿದ್ದ ಹಿನ್ನೆಲೆಯಲ್ಲಿ ಮಾಜಿ ಸಚಿವ ಕರುಣಾಕರ ರೆಡ್ಡಿ ಅವರು ಶುಕ್ರವಾರ ಹೈದರಾಬಾದ್ನ ಕೋಠಿಯಲ್ಲಿರುವ ಸಿಬಿಐ ಕಚೇರಿಗೆ ಹಾಜರಾಗಿದ್ದು, ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆ ಆರಂಭಿಸಿದೆ.
ಅಕ್ರಮ ಗಣಿಗಾರಿಕೆ ಕುರಿತು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ರೋಸಯ್ಯ ಅವರು ಸಿಬಿಐ ವಿಚಾರಣೆಗೆ ಅನುಮತಿ ನೀಡಿದ್ದು ಹಾಗೂ ಕರ್ನಾಟಕ ಲೋಕಾಯುಕ್ತರು ನೀಡಿದ್ದ ಅಕ್ರಮ ಗಣಿ ವರದಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ್ದರಿಂದಾಗಿ ರೆಡ್ಡಿ ಬ್ರದರ್ಸ್ ಅಧಿಕಾರ ಕಳೆದುಕೊಂಡಿದ್ದೂ ಸಹಾ ಸಬಿಐ ವಿಚಾರಣೆಗೆ ಹಾದಿ ಸುಗಮವಾಗಿತ್ತು.
ಜನಾರ್ದನ ರೆಡ್ಡಿ ಬಂಧನಕ್ಕೆ ಕಾರ್ಯತಂತ್ರ ರೂಪಿಸಿದ್ದ ಸಿಬಿಐ ಅಧಿಕಾರಿಗಳು ಸಪ್ಟೆಂಬರ್ 5ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಓಎಂಸಿ ಮಾಲೀಕ ಜನಾರ್ದನ ರೆಡ್ಡಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಬಿ.ವಿ.ಶ್ರೀನಿವಾಸ ರೆಡ್ಡಿ ಅವರ ನಿವಾಸದ ಮೇಲೆ ದಾಳಿ ನಡೆಸಿ ಬಂಧಿಸಿದ್ದರು.
ಸಿಬಿಐ ಅಧಿಕಾರಿಗಳು ಗುರುವಾರ ಸೋಮಶೇಖರ ರೆಡ್ಡಿ ಅವರ ವಿಚಾರಣೆ ನಡೆಸಿದ್ದರು.
ಆಂಧ್ರದ ಅಧಿಕಾರಿಗಳ ವಿಚಾರಣೆ ವೈ.ಎಸ್.ರಾಜಶೇಖರ ರೆಡ್ಡಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಯಾಗಿದ್ದ ರಾಜಗೋಪಾಲ್ ಅವರು ಅಕ್ರಮ ಗಣಿಗಾರಿಕೆಗೆ ಸಹಕಾರ ನೀಡಿದ್ದರು ಎಂಬ ಆಪಾದನೆಯ ಹಿನ್ನೆಲೆಯಲ್ಲಿ ಅವರ ವಿಚಾರಣೆಯನ್ನೂ ಸಿಬಿಐ ಆರಂಭಿಸಿದೆ.
ಕರ್ನಾಟಕದ ಅಧಿಕಾರಿಗಳಿಗೂ ದಿಗಿಲು ಅತ್ತ ಸಿಬಿಐ ಅಕ್ರಮ ಗಣಿಗಾರಿಕೆಗೆ ಸಹಕಾರ ನೀಡಿದ್ದಾರೆ ಎಂಬ ಆಪಾದನೆಯ ಮೇರೆಗೆ ಆಂಧ್ರಪ್ರದೇಶದ ಅಧಿಕಾರಿಗಳ ವಿಚಾರಣೆ ಆರಂಭಿಸುತ್ತಿದ್ದಂತೆ ಇತ್ತ ರಾಜ್ಯದಲ್ಲಿ ರೆಡ್ಡಿ ಬ್ರದರ್ಸ್ ಜೊತೆ ಶಾಮೀಲಾಗಿ ಅಕ್ರಮಕ್ಕೆ ಸಹಕರಿಸಿದ್ದ ಅಧಿಕಾರಿಗಳಿಗೂ ಸಣ್ಣಗೆ ನಡುಕ ಶುರುವಾಗಿದೆ. ಇದಕ್ಕೆ ಪೂರಕವೆಂಬಂತೆ ಲೋಕಾಯುಕ್ತರು ನೀಡಿರುವ ಅಕ್ರಮ ಗಣಿ ವರದಿಯಲ್ಲಿ ರೆಡ್ಡಿಗಳೊಂದಿಗೆ ಶಾಮೀಲಾಗಿರುವ ಹೆಸರುಗಳನ್ನೂ ಪ್ರಸ್ತಾಪಿಸಲಾಗಿದ್ದು, ಒಂದು ಕಾಲದಲ್ಲಿ ದಬ್ಬಾಳಿಕೆ ನಡೆಸಿದ್ದ ಅಧಿಕಾರಿಗಳು ಸಿಬಿಐ ವಿಚಾರಣೆಗೆ ಒಳಪಡುವುದು ಬಹುತೇಕ ಖಚಿತವಾಗಿದೆ.