ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಗಡಿ ಕಾಯೋದು ಬಿಟ್ಟು ಪ್ರೇಯಸಿ ಮನೆ ಮುಂದೆ ಯೋಧನ ಧರಣಿ! (Hubballi | Solider | CRPF | Lover | Police | Wedding | Karnataka News | Bangalore News,)
ಗಡಿ ಕಾಯೋದು ಬಿಟ್ಟು ಪ್ರೇಯಸಿ ಮನೆ ಮುಂದೆ ಯೋಧನ ಧರಣಿ!
ಹುಬ್ಬಳ್ಳಿ, ಶನಿವಾರ, 17 ಸೆಪ್ಟೆಂಬರ್ 2011( 11:47 IST )
ದೇಶದ ಗಡಿ ಕಾಯಬೇಕಾದ ಸಿಆರ್ಪಿಎಫ್ ಯೋಧನೊಬ್ಬ ಸಮವಸ್ತ್ರದಲ್ಲೇ ಪ್ರಿಯತಮೆ ಮದುವೆಯಾಗಲು ನಿರಾಕರಿಸುವುದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಲ್ಲದೇ, ಇದೀಗ ಪ್ರಿಯತಮೆ ಮನೆ ಮುಂದೆ ಕಣ್ಣೀರು ಸುರಿಸುತ್ತ ಧರಣಿ ಕುಳಿತಿರುವ ಘಟನೆ ನಡೆದಿದೆ.
ಹುಬ್ಬಳ್ಳಿಯ ನೇಕಾರ ನಗರದ ನಿವಾಸಿ ಕೃಷ್ಣ ಸಾವಂತ್ ಸಿಆರ್ಪಿಎಫ್ ಯೋಧ. ಛತ್ತೀಸ್ಗಢದಲ್ಲಿ ಸೇವೆ ಸಲ್ಲಿಸುತ್ತಿರುವ ಈತ ಕೆಲ ತಿಂಗಳ ಹಿಂದೆ ಊರಿನ ಲಕ್ಷ್ಮಿ ಎಂಬಾಕೆ ಜತೆ ಹಿರಿಯರ ಸಮ್ಮತಿ ಮೇರೆಗೆ ವಿವಾಹ ಮಾತುಕತೆ ನಡೆಸಿ ನಿಶ್ಚಿತಾರ್ಥ ಮಾಡಿಕೊಂಡು ಛತ್ತೀಸ್ಗಢಕ್ಕೆ ವಾಪಾಸಾಗಿದ್ದ.
ಮದುವೆಯಾಗುವ ಯುವತಿ, ಈಗಾಗಲೇ ನಿಶ್ಚಿತಾರ್ಥವಾಗಿದೆ.ಹಾಗಾಗಿ ಕೃಷ್ಣ ಸಾವಂತ್ ಆಕೆ ಜತೆ ದಿನಾಲೂ ಮೊಬೈಲ್ನಲ್ಲಿ ಹರಟೆ ಹೊಡೆಯುತ್ತಿದ್ದ. ಆದರೆ ಒಂದು ದಿನ ಪ್ರಿಯತಮೆ ಲಕ್ಷ್ಮಿ ಮೊಬೈಲ್ ಕರೆಯನ್ನು ಸ್ವೀಕರಿಸಿಲ್ಲ. ಮರುದಿನ ಕರೆ ಮಾಡಿದ ಕೃಷ್ಣ, ಲಕ್ಷ್ಮಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದ.
ಅಂತೂ ಭಾವಿ ಪತಿಯಿಂದ ಕೆಟ್ಟ, ಕೆಟ್ಟ ಶಬ್ದಗಳಿಂದ ಮಂಗಳಾರತಿ ಮಾಡಿಸಿಕೊಂಡ ಲಕ್ಷ್ಮಿ ತಾಯಿಯ ಬಳಿ ದೂರು ನೀಡಿದ್ದಳು. ಮದುವೆಗೆ ಮುನ್ನವೇ ಮೊಬೈಲ್ ಕರೆ ಸ್ವೀಕರಿಸಿಲ್ಲ ಎಂಬ ಕಾರಣಕ್ಕೆ ಈ ಪರಿ ಎಗರಾಡುವ ಈತ ನಂತರ ಹೇಗೆ ಎಂಬುದಾಗಿ ಹುಡುಗಿ ಕ್ಯಾತೆ ತೆಗೆದಿದ್ದಳು. ಕೃಷ್ಣನ ವರ್ತನೆ ಮನೆ ಮಂದಿ ಸಿಟ್ಟಿಗೂ ಕಾರಣವಾಗಿತ್ತು.
ಕೃಷ್ಣನ ರಂಪಾಟದಿಂದ ಹುಡುಗಿಯ ಮನೆಯವರು ಮದುವೆಯನ್ನೇ ರದ್ದುಗೊಳಿಸಿ, ನೀನು ಬೇಡ, ನಿನ್ನ ಸಹವಾಸನೂ ಬೇಡ ಎಂಬ ಸಂದೇಶ ರವಾನಿಸಿದ್ದರು. ಇದರಿಂದ ಯೋಧ ಕೃಷ್ಣ ಹತಾಶನಾಗಿ, ಕೆಲಸ ಬಿಟ್ಟು ಊರಿಗೆ ಮರಳಿದ್ದಾನೆ.
ಇಲ್ಲಾರೀ...ನಾನು ಆಕೆ ಇಲ್ದೆ ಬದುಕು ಹಂಗೆ ಇಲ್ಲ...ಎಂಬುದಾಗಿ ದೇವದಾಸನಂತೆ ಮಾತನಾಡುತ್ತಿದ್ದಾನೆ. ಮದುವೆಗೆ ನಿರಾಕರಿಸಿದ್ದರಿಂದ ಮನನೊಂದ ಕೃಷ್ಣ ಆತ್ಮಹತ್ಯೆಗೂ ಮುಂದಾಗಿದ್ದ ಎನ್ನಲಾಗಿದೆ. ಇದೀಗ ಹುಬ್ಬಳ್ಳಿ ಕಮರೀಪೇಟೆ ಗಿರಿಯಾಲ ರಸ್ತೆಯಲ್ಲಿರುವ ಯುವತಿ ಲಕ್ಷ್ಮಿ ಸಂಬಂಧಿಕರ ಮನೆ ಮುಂದೆ ಯೋಧ ಧರಣಿ ನಡೆಸುತ್ತಿದ್ದಾನೆ. ಪ್ರಕರಣ ನ್ಯಾಯಾಲಯದ ಕಟಕಟೆಗೂ ಹೋಗಿದೆ. ಮುಂದೇನು ಎಂಬುದನ್ನು ಕಾದು ನೋಡಬೇಕು.