ರಾಜಕೀಯ ಬೆಳವಣಿಗೆ, ರಾಜಕೀಯ ಹಗ್ಗ ಜಗ್ಗಾಟ, ಸ್ವತಃ ಪಕ್ಷದ ಬಗ್ಗೆಯೇ ಟೀಕಾಪ್ರಹಾರ ನಡೆಸುವುದು ಕಾಂಗ್ರೆಸ್ ಮುಖಂಡ, ಸಂಸದ ಎಚ್.ವಿಶ್ವನಾಥ್ ಸ್ವಭಾವ. ಇದೀಗ ನಟಿ ರಮ್ಯಾ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕೃಪಾಕಟಾಕ್ಷದಿಂದ ಕಾಂಗ್ರೆಸ್ನಲ್ಲಿ ಸಾಂಸ್ಥಿಕ ಚುನಾವಣೆಗೆ ಪ್ರವೇಶ ಮಾಡುತ್ತಿರುವುದಕ್ಕೆ ತಿರುಗೇಟು ನೀಡಿದ್ದಾರೆ.
ನವರಾತ್ರಿ ಸಂದರ್ಭದಲ್ಲಿ ಮೈಸೂರು ಅರಮನೆಯಲ್ಲಿ ಒಂದು ದಿನ ಮಲ್ಲಯುದ್ಧ, ಮತ್ತೊಂದು ದಿನ ಸಖಿಯರ ಪ್ರದರ್ಶನ ಹೀಗೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಅದೇ ರೀತಿ ಕಾಂಗ್ರೆಸ್ನಲ್ಲೂ ನಡೆಯುತ್ತಿದೆ ಎಂದೆನಿಸುತ್ತಿದೆ ಎಂದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಸಖಿಯರ ಪ್ರದರ್ಶನ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಹಾಗನಿಸುತ್ತದೆ ಎಂದು, ನಮ್ಮದು 125 ವರ್ಷದ ಪಕ್ಷವಲ್ಲವೇ ಎಂದು ಮರು ಪ್ರಶ್ನಿಸಿದರು.
ನಟಿ ರಮ್ಯಾ ಅವರನ್ನು ಡಿ.ಕೆ.ಶಿವಕುಮಾರ್ ಕರೆತಂದಿದ್ದಾರೆ. ಪಕ್ಷದ ಸಿದ್ದಾಂತ, ಮೌಲ್ಯ ಹೊತ್ತು ಬರುವ ಕ್ರಿಯಾಶೀಲರೆಲ್ಲರಿಗೂ ಸ್ವಾಗತಿವಿದೆ. ಕಾಂಗ್ರೆಸ್ಗೆ ತಾರಾ ಮೌಲ್ಯ ಇರುವವರ ಅಗತ್ಯವೂ ಇದೆ. ಇದರಿಂದ ಪಕ್ಷಕ್ಕೆ ಎಷ್ಟು ಉಪಯೋಗ ಆಗಲಿದೆ ಎಂಬುದನ್ನು ನೀವು (ಪತ್ರಕರ್ತರು) ಡಿಕೆಶಿ ಅವರನ್ನೇ ಕೇಳಿ. ಅದ್ಯಾಕೆ, ವರ್ಕ್ಔಟ್ ಆಗಲಿಲ್ಲ ಎಂಬುದನ್ನು ಬೇಕಿದ್ದರೆ ನಾನು ನಂತರ ಹೇಳುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಯುವಕರು ರಾಜಕೀಯ ಪ್ರವೇಶಿಸುವುದು ಮಹತ್ವದ್ದಾಗಿದೆ. ಇದಕ್ಕಾಗಿಯೇ ಯುವ ಕಾಂಗ್ರೆಸ್ನಲ್ಲಿ ಎಲ್ಲರಿಗೂ ಅವಕಾಶ ನೀಡಲಾಗುತ್ತಿದೆ ಎಂದರು.