ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಬಾಯಿಗೆ ಬಂದಂತೆ ಮಾತಾಡ್ಬೇಡಿ: ರೇಣುಕಾಚಾರ್ಯಗೆ ಬಿಜೆಪಿ (Renukacharya | BJP | Hicommond | Koppala | By election | Karnataka News | Bangalore News,)
ಬಾಯಿಗೆ ಬಂದಂತೆ ಮಾತಾಡ್ಬೇಡಿ: ರೇಣುಕಾಚಾರ್ಯಗೆ ಬಿಜೆಪಿ
ಕೊಪ್ಪಳ, ಮಂಗಳವಾರ, 20 ಸೆಪ್ಟೆಂಬರ್ 2011( 10:22 IST )
ಪ್ರತಿಯೊಂದನ್ನು ಸಮರ್ಥಿಸಿಕೊಂಡು, ಬೇಕಾಬಿಟ್ಟಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿಕೊಳ್ಳುವುದಲ್ಲದೇ ಪಕ್ಷವನ್ನು ಮುಜುಗರಕ್ಕೀಡು ಮಾಡುತ್ತ ಬಂದಿರುವ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಬಾಯಿಗೆ ಹೈಕಮಾಂಡ್ ಬೀಗ ಹಾಕಿದೆ.
ಸದ್ಯ ನಡೆಯುತ್ತಿರುವ ಕೊಪ್ಪಳ ಉಪಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಪತ್ರಿಕಾಗೋಷ್ಠಿ ನಡೆಸದಂತೆ, ಪ್ರಚಾರ ಸಮಯದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸದಂತೆ ಪಕ್ಷ ತಾಕೀತು ಮಾಡಿದ ಪರಿಣಾಮ ರೇಣುಕಾಚಾರ್ಯ ಪತ್ರಕರ್ತರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ದುಂಬಾಲು ಬಿದ್ದು ಕೇಳಿದರೂ, ಸಾರ್ ಜನಾ ಇದ್ದಾರೆ, ಮಾತಾಡ್ಬೇಕಿದೆ. ಪ್ಲೀಸ್ ಆನಂತರ ಸಿಗ್ತೀನಿ ಎಂದು ಜಾರಿಕೊಳ್ಳುತ್ತಿದ್ದಾರೆ.
ಚುನಾವಣೆ ಪ್ರಚಾರಕ್ಕೆ ಬರುವ ಸಚಿವರಲ್ಲಿ ಪ್ರತಿದಿನ ಒಬ್ಬರು ಸುದ್ದಿಗೋಷ್ಠಿ ನಡೆಸುವುದನ್ನು ಸ್ಥಳೀಯ ಬಿಜೆಪಿ ರೂಢಿಸಿಕೊಂಡಿದೆ. ರೇಣುಕಾಚಾರ್ಯ ಸುದ್ದಿಗೋಷ್ಠಿ ಸೋಮವಾರ ಬೆಳಿಗ್ಗೆ ನಿಗದಿಯಾಗಿದ್ದು, ದಿಢೀರ್ ರದ್ದಾಗಿತ್ತು. ಇದರ ಹಿಂದಿನ ಗುಟ್ಟೇನು ಎಂದು ಇದರ ಜಾಡುಹಿಡಿದು ಹೋದ ಕನ್ನಡಪ್ರಭಕ್ಕೆ ಕೊನೆಗೂ ಮಾಹಿತಿ ಲಭ್ಯವಾಗಿದ್ದು, ರೇಣುಕಾಚಾರ್ಯ ಬಾಯಿಗೆ ಬಿಜೆಪಿ ವರಿಷ್ಠರು ಬೀಗ ಹಾಕಿಯೇ ಕೊಪ್ಪಳ ಚುನಾವಣಾ ಪ್ರಚಾರಕ್ಕೆ ಕಳುಹಿಸಲಾಗಿದೆಯಂತೆ!