ನೀವೊಂದು ದಿನವನ್ನು ನಿಗದಿಪಡಿಸಿದಲ್ಲಿ, ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಲಘು ಧಾಟಿಯಲ್ಲಿ ಹೇಳಿದ್ದಾರೆ.
ತಾನು ಈ ಹಿಂದೆ ನೀಡಿದ್ದ ನಿವೃತ್ತಿ ಮುನ್ಸೂಚನೆ ಸಂಬಂಧ ವರದಿಗಾರರಿಂದ ಆಗಾಗ ಪ್ರಶ್ನೆಗಳು ಬರುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಯಾವತ್ತೂ ನಿವೃತ್ತಿ ಎಂಬ ಪದವನ್ನು ಬಳಸಿಲ್ಲ ಎಂದರು.
ಕೊಯಂಬತ್ತೂರಿನಲ್ಲಿ ಪತ್ರಕರ್ತರಿಗೆ ನಾನು ನಿವೃತ್ತಿಯಾಗಬೇಕೆಂಬ ಆಸೆಯಿದ್ದರೆ, ದಿನಾಂಕವೊಂದನ್ನು ನಿಗದಿ ಮಾಡಿ. ನಾನು ಅದರಂತೆ ನಡೆದುಕೊಳ್ಳುತ್ತೇನೆ ಎಂದು ವಿಶ್ವ ಶಾಸ್ತ್ರೀಯ ತಮಿಳು ಸಮ್ಮೇಳನದ ಕೊನೆಯ ದಿನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತಮಿಳು ಸಮ್ಮೇಳನ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಅವಧಿಗೂ ಮುಂಚಿತವಾಗಿ ವಿಧಾನಸಭಾ ಚುನಾವಣೆ ಸಂಭಾವ್ಯತೆಯಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕರುಣಾನಿಧಿ, ತಮಿಳು ಭಾಷೆಯ ಕುರಿತ ವಿಚಾರಗಳು ಬರುವಾಗ ಅದಕ್ಕಿಂತ ಚುನಾವಣೆಯೇ ಮುಖ್ಯವಾಗುತ್ತದೆಯೇ ಎಂದು ಕೇಳುವ ಮೂಲಕ ಪ್ರಶ್ನಿದವರನ್ನೇ ಸುಮ್ಮನಾಗಿಸಿದರು.
ತಾನು ರಾಜಕೀಯದಿಂದ ದೂರ ಉಳಿಯುವುದಾಗಿ ಇತ್ತೀಚೆಗೆ ಹಲವು ವೇದಿಕೆಗಳಲ್ಲಿ ಕರುಣಾನಿಧಿ ಹೇಳುತ್ತಾ ಬಂದಿದ್ದರು. ಅಲ್ಲದೆ ವಿಶ್ವ ತಮಿಳು ಸಮ್ಮೇಳನದ ನಂತರ ತನ್ನ ಪುತ್ರ ಹಾಗೂ ಉಪ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ ಎಂದೂ ಹೇಳಲಾಗುತ್ತಿತ್ತು.
ಆದರೆ ಸ್ಟಾಲಿನ್ ಹಾಗೂ ತನ್ನ ದೊಡ್ಡ ಮಗ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಎಂ.ಕೆ. ಅಳಗಿರಿ ನಡುವಿನ ವಿರಸದಿಂದಾಗಿ ಕರುಣಾನಿಧಿ ತನ್ನ ನಿವೃತ್ತಿ ನಿರ್ಧಾರದ ಕುರಿತು ಈಗ ಯಾವುದೇ ಪ್ರಸ್ತಾಪ ನಡೆಸುತ್ತಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.