'ಇಮಾಮ್ ಸಾಬ್ರಿಗೂ ಗೋಕುಲಾಷ್ಟಮಿಗೂ ಏನ್ ಸಂಬಂಧ?' ಅನ್ನೋ ತಮಾಷೆಯ ಮಾತನ್ನು ನೀವು ಕೇಳಿರಬಹುದು. ಅಂಥದೊಂದು ಸನ್ನಿವೇಶಕ್ಕೆ ಮಾಧ್ಯಮ ಮಿತ್ರರು ಇತ್ತೀಚೆಗೆ ಸಾಕ್ಷಿಯಾಗಬೇಕಾಯಿತು. ತಾನಾಯಿತು, ತನ್ನ ಕೆಲಸವಾಯಿತು ಎಂಬಂತೆ ಹಾದಿಬದಿಯ ಮರಗಳನ್ನು ಮಕ್ಕಳಂತೆ ಸಾಕುತ್ತಿರುವ ಸಾಲುಮರದ ತಿಮ್ಮಕ್ಕನವರನ್ನು ಬಣ್ಣದ ಲೋಕದ ಮಂದಿ 'ತವರಿನ ಋಣ' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕೆ ಕರೆದುಕೊಂಡು ಬಂದಿದ್ದರು.
ಸಮಾರಂಭದಲ್ಲಿ ಪಕ್ಕದಲ್ಲಿ ಕೂತಿದ್ದ ಪೂಜಾಗಾಂಧಿಯವರು ತಿಮ್ಮಕ್ಕನವರ ಕೈಗೆ ಮೈಕು ಕೊಟ್ಟು 'ಮಾತಾಡಿ' ಅಂದರು. ಪ್ರಾಯಶಃ ತಿಮ್ಮಕ್ಕನವರಿಗೆ ಇವೆಲ್ಲಾ ಹೊಸದು. 'ಏನು ಮಾತಾಡ್ಲಮ್ಮಾ' ಎಂಬಂತೆ ಕೇಳಿದಾಗ 'ಗುಟ್ಟೊಂದ ಹೇಳುವೆ ಪುಟಾಣಿ ಮಕ್ಕಳೇ' ಶೈಲಿಯಲ್ಲಿ ಮಳೆಹುಡುಗಿ ಅವರ ಕಿವಿಯಲ್ಲಿ ಪಿಸಪಿಸ ಎಂದರು.
ಪಿಕಪ್ ತೆಗೆದುಕೊಂಡ ತಿಮ್ಮಕ್ಕನವರು ಮಾತಿಗೆ ಶುರುವಿಟ್ಟುಕೊಂಡು, ತಮಗೆ ಮಕ್ಕಳ ಭಾಗ್ಯವಿಲ್ಲದಾದಾಗ ಯಜಮಾನರ ಸಲಹೆಯಂತೆ ಸಾಲುಮರಗಳನ್ನು ನೆಟ್ಟು ಪೋಷಿಸಿದ್ದನ್ನು ನಿರರ್ಗಳವಾಗಿ ಹೇಳಿದಾಗ ಸಭೆಯ ತುಂಬಾ ಚಪ್ಪಾಳೆ.
ಇದು ಇಷ್ಟಕ್ಕೇ ಮುಗಿಯಲಿಲ್ಲ. ಚಿತ್ರತಂಡದವರೆಲ್ಲಾ ಒಟ್ಟಾಗಿ ಸೇರಿ ಈ ಮಮತಾಮಯಿಯ ಕೈಗಳಿಂದ ಚಿತ್ರದ ಹಾಡಿನ ಸಿ.ಡಿ.ಗಳನ್ನು ಬಿಡುಗಡೆ ಮಾಡಿಸಿದರು. ಈ ಚಿತ್ರದ ನಿರ್ದೇಶಕರು ರಮೇಶ್ರಾಜ್. ಅಭಿಮಾನ್ರವರು ಸಂಗೀತ ನೀಡಿದ್ದಾರೆ. ಚಿತ್ರವು ಎಷ್ಟು ಚೆನ್ನಾಗಿದೆಯೋ ಹಾಡುಗಳೂ ಅಷ್ಟೇ ಚೆನ್ನಾಗಿ ಮೂಡಿಬಂದಿದೆ ಎಂಬ ಅಭಿಪ್ರಾಯ ಸಮಾರಂಭದಲ್ಲಿ ವ್ಯಕ್ತವಾಯಿತು.
ಯಾವುದೇ ಒಂದು ಚಿತ್ರವು ವೀಕ್ಷಣೆಯ ಸಂದರ್ಭದಲ್ಲಿ ಪರಿಪೂರ್ಣ ಅನುಭೂತಿಯನ್ನು ನೀಡಬೇಕೆಂದರೆ ಅದಕ್ಕೆ ಹಿನ್ನೆಲೆ ಸಂಗೀತದ ಲೇಪನ ಕೊಟ್ಟಾಗ ಮಾತ್ರ ಸಾಧ್ಯ. ಆದರೆ ಅದಕ್ಕಿಂತ ಮುಂಚೆಯೇ ಈ ಚಿತ್ರವು ತನ್ನ ಆಶಯಗಳನ್ನು ಚೆನ್ನಾಗಿ ಬಿಂಬಿಸಿದೆ ಎಂದು ಬೆನ್ನುತಟ್ಟಿದವರು ಸಂಗೀತ ನಿರ್ದೇಶಕ ಅಭಿಮಾನ್. ಚಿತ್ರವು ಬಿಡುಗಡೆಯಾಗಿ ಯಶಸ್ಸು ಸಾಧಿಸುವ ಮೂಲಕ ಈ ಅಭಿಪ್ರಾಯಕ್ಕೆ ಪುಷ್ಟಿ ನೀಡುವಂತಾಗಲಿ ಎಂದು ಆಶಿಸೋಣ.