ಮಹಾತ್ಮಗಾಂಧಿ ಜನ್ಮದಿನ ಪ್ರಯುಕ್ತ ಗಾಂಧಿ ಸ್ಮಾರಕ ನಿಧಿಯು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಿಳಿಸಿದ್ದ ಯಡಿಯೂರಪ್ಪ, ಇಂದಿನ ಸಮಾಜದಲ್ಲಿ ನಮ್ಮನ್ನು ಸೇರಿದಂತೆ ಯಾವುದೇ ರಾಜಕಾರಣಿಗಳಿಗೆ ಗಾಂಧೀಜಿ ತತ್ವ ಸಿದ್ಧಾಂತಗಳ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.
ಅಕ್ರಮ ಗಣಿಗಾರಿಕೆ ಸಹಿತ ಹಲವು ಆರೋಪಗಳಲ್ಲಿ ಸಿಲುಕಿರುವ ಮಾಜಿ ಸಿಎಂ ಯಡಿಯೂರಪ್ಪ ಅವರ ಇಂತಹ ಹೇಳಿಕೆಯು ರಾಜ್ಯ ರಾಜಕೀಯದಲ್ಲಿ ಬಹಳ ಕುತೂಹಲಕ್ಕೆ ಕಾರಣವಾಗಿದೆ. ಅಂದ ಹಾಗೇ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಇದೀಗ ಪಶ್ಚಾತ್ತಾಪ ಕಾಡುತ್ತಿದೆಯೇ ಎಂಬ ಅನುಮಾನ ಜನಸಾಮಾನ್ಯರಲ್ಲಿ ಮೂಡುತ್ತಿರುವುದು ಸುಳ್ಳಲ್ಲ.
ಹಿಂದೊಮ್ಮೆ ಮಹಾತ್ಮಗಾಂಧಿ ರೈಲಿನಲ್ಲಿ ಮೂರನೇ ದರ್ಜೆಯಲ್ಲಿ ಪಯಣಿಸುತ್ತಿದ್ದರು. ಯಾಕೆಂದರೆ ಅದಕ್ಕಿಂತ ಕೆಳಮಟ್ಟದ ನಾಲ್ಕನೇ ದರ್ಜೆ ಅಂದು ಇರಲಿಲ್ಲ. ಇಂತಹ ಗಾಂಧೀಜಿ ತತ್ವಗಳು ನಮಗೆಲ್ಲರಿಗೂ ಆದರ್ಶವಾಗಿದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಗಾಂಧೀಜಿ ವಿಚಾರಗಳನ್ನು ರಾಜಕಾರಣಿಗಳು ತಮ್ಮ ಬದುಕಿನಲ್ಲಿ ಆಳವಡಿಸಿಕೊಳ್ಳಬೇಕು. ಆಗ ಮಾತ್ರ ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದವರು ಸೇರಿಸಿದರು.