ಮುಖ್ಯ ಪುಟ  ಧರ್ಮ > ಧಾರ್ಮಿಕ ಯಾತ್ರೆ > ಕ್ಷೇತ್ರಗಳು
 
ಪರಮ ಪಾವನೆ ಭಕ್ತವತ್ಸಲೆ ಕೊಲ್ಲೂರು ಶ್ರೀಮೂಕಾಂಬಿಕೆ
ನಾಗೇಂದ್ರ ತ್ರಾಸಿ
WD
ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು, ಸೌಪರ್ಣಿಕಾ ತಟದಲ್ಲಿರುವ ವಾಸ್ತುಶಿಲ್ಪ ಆಧಾರಿತ ಶಾಸ್ತ್ರೋಕ್ತವಾದ ಮಧ್ಯಮ ಗಾತ್ರದ ಶಿಲಾಮಯ ಪುಣ್ಯಕ್ಷೇತ್ರ. ಇಲ್ಲಿ ಭಕ್ತ ವತ್ಸಲೆಯಾದ ಶ್ರೀದೇವಿಯು ಮೂಕಾಂಬಿಕೆಯ ರೂಪದಲ್ಲಿ ನೆಲೆಸಿ ಭಕ್ತ ಜನಕೋಟಿಯನ್ನು ಹರಸುತ್ತಿದ್ದಾಳೆ.

ವಿಶೇಷತೆ:

ಈ ಪುಣ್ಯ ಕ್ಷೇತ್ರವು ವಿದ್ಯಾದಶಮಿ ದಿನ ನಡೆಯುವ ಅಕ್ಷರಾಭ್ಯಾಸಕ್ಕೆ ಹೆಸರುವಾಸಿ. ದೇಶದೆಲ್ಲೆಡೆಯಿಂದ ಗಣ್ಯರು, ರಾಜಕಾರಣಿಗಳು, ಉದ್ಯಮಿಗಳಿಗೆ ಭಕ್ತಿಯ ತಾಣವಿದು. ತಮಿಳುನಾಡು ಮಾಜಿ ಮುಖ್ಯಮಂತ್ರಿ/ನಟ ಎಂಜಿಆರ್ ಅವರು ಈ ಕ್ಷೇತ್ರಕ್ಕೆ ಚಿನ್ನದ ಖಡ್ಗ ಒಪ್ಪಿಸಿದ್ದರೆ, ಸಂಗೀತ ನಿರ್ದೇಶಕ ಇಳಯರಾಜ ಅವರು ಕೋಟಿ ರೂ. ಮೌಲ್ಯದ ವಜ್ರ ಖಚಿತ ಹಸ್ತ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಒಂದು ಆನೆಯನ್ನು ಭಕ್ತಿಯಿಂದ ಸಮರ್ಪಿಸಿದ್ದಾರಲ್ಲದೆ ಚೆನ್ನೈನಿಂದ ಕೊಲ್ಲೂರಿಗೆ ಬಸ್ ಸೌಲಭ್ಯವನ್ನೂ ಕಲ್ಪಿಸಿದ್ದಾರೆ. ಉದ್ಯಮಿ ವಿಜಯ ಮಲ್ಯ ಅವರು ಧ್ವಜಸ್ಥಂಬಕ್ಕೆ ಚಿನ್ನದ ಹೊದಿಕೆ ಮಾಡಿಸಿದ್ದಾರೆ. ನಾಲ್ಕು ಕೋಟಿ ರೂ. ಅಂದಾಜು ವೆಚ್ಚದ ಸ್ವರ್ಣ ರಥ ಇಲ್ಲಿ ಗಮನ ಸೆಳೆಯುತ್ತದೆ. ಖ್ಯಾತ ಗಾಯಕ ಜೇಸುದಾಸ್ ಇಲ್ಲಿಯ ಪರಮ ಭಕ್ತರು. ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು ಸೇರಿದಂತೆ ಇವರೆಲ್ಲರೂ ಇಲ್ಲಿಗೆ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ.
WD

ಗರ್ಭಗುಡಿಯಲ್ಲಿನ ಪಾಣಿಪೀಠ ಸ್ವರ್ಣರೇಖೆ ಇರುವ ಜ್ಯೋತಿರ್ಲಿಂಗದಿಂದ ಒಡಗೂಡಿದೆ. ಅಲ್ಲಿ ಪ್ರಕೃತಿ, ಶಕ್ತಿ, ಕಾಳಿ, ಲಕ್ಷ್ಮಿ, ಸರಸ್ವತಿ ನೆಲೆಯಾಗಿದ್ದಾರೆ ಎಂಬ ನಂಬಿಕೆ ಇದೆ. ಪುರಾಣದಲ್ಲಿ ವರ್ಣಿಸಿದಂತೆ ಶ್ರೀಚಕ್ರದಲ್ಲಿ ಆದಿಶಕ್ತಿ ಮತ್ತು ಸಮಸ್ತ ದೇವತೆಗಳು ನೆಲೆಸಿರುವಂತೆ ಜ್ಯೋರ್ತಿಲಿಂಗದಲ್ಲಿ ಆದಿಶಕ್ತಿ ಮತ್ತು ಬ್ರಹ್ಮ, ವಿಷ್ಣು, ಮಹೇಶ್ವರ ದೇವತೆಗಳು ನೆಲೆಸಿದ್ದಾರೆ. ಮೊದಲೇ ಇದ್ದ ಈ ಸಾನಿಧ್ಯವನ್ನು ಕೋಲ ಮಹರ್ಷಿಯು ಗುರುತಿಸಿದನೆಂದು ಪುರಾಣದಲ್ಲಿ ಹೇಳಿದೆ.

ಜ್ಯೋತಿರ್ಲಿಂಗದ ಪಶ್ಚಿಮ ಭಾಗದಲ್ಲಿ ಶ್ರೀದೇವಿಯ ಪಂಚಲೋಹದ ಸುಂದರ ಮೂರ್ತಿ ಇದೆ. ಶಂಖ, ಚಕ್ರ, ಅಭಯ ವರದ ಹಸ್ತಳಾದ, ಸರ್ವಾಲಂಕಾರಭೂಷಿತಳಾದ ಮೂಕಾಂಬಿಕೆ ಪದ್ಮಾಸನದಲ್ಲಿ ವಿರಾಜಮಾನಳಾಗಿದ್ದಾಳೆ. ಒಳಸುತ್ತಿನ ದಕ್ಷಿಣ ಭಾಗದಲ್ಲಿ ಅಂಬಿಕೆಯ ಮಗ ದಶಭುಜ ಗಣಪತಿಯ ಚಿಕ್ಕ ಗುಡಿಯಿದೆ. ಪಶ್ಚಿಮದಲ್ಲಿ ಆದಿ ಶಂಕರಾಚಾರ್ಯರು ತಪಸ್ಸು ಮಾಡಿದ ಪೀಠ, ಅದರ ಮುಂಭಾಗದಲ್ಲಿ ಆದಿ ಶಂಕರರ ಅಮೃತ ತತ್ವ ಸಾರುವ ಅಮೃತ ಶಿಲೆಯ ಮೂರ್ತಿ ಇದೆ. ಶಂಕರಾಚಾರ್ಯ ಪೀಠ ದರ್ಶನ ಮಾಡಲು ದೇವಸ್ಥಾನದ ಕಚೇರಿಯಿಂದ ಅನುಮತಿ ಪತ್ರ ಪಡೆಯಬೇಕು.
WD

ಒಳಸುತ್ತಿನ ಉತ್ತರ ದ್ವಾರದಿಂದ ಹೊರ ಬಂದರೆ ಈಶಾನ್ಯದ ಯಾಗ ಶಾಲೆಯ ಸಮೀಪ ವೀರಭದ್ರೇಶ್ವರ, ಮೂಕಾಸುರನ ವಧೆ ಮಾಡುವಾಗ ಆದಿ ದೇವಿಯ ಜೊತೆಯಲ್ಲಿ ಬಂದವನೆಂದು ಪ್ರತೀತಿ. ವೀರಭದ್ರನಿಗೆ ವಿಭೂತಿ ಅರ್ಚನೆ, ವಿಭೂತಿ ಪ್ರಸಾದಕ್ಕೆ ಹೆಚ್ಚಿನ ಪ್ರಾಶಸ್ತ್ಯ. ಅದೇ ರೀತಿ ದಕ್ಷಿಣಕ್ಕೆ ತಿರುಗಿದರೆ ಗರ್ಭಗುಡಿಯ ನೇರ ಪೂರ್ವಕ್ಕೆ ಬಲಿಪೀಠ, ಧ್ವಜಸ್ತಂಭ ಮತ್ತು ದೀಪಸ್ತಂಭಗಳು. ದೀಪಸ್ತಂಭಕ್ಕೀಗ ಚಿನ್ನದ ಹೊದಿಕೆ ಹಾಕಲಾಗಿದೆ. ಕಾರ್ತಿಕ ಮಾಸದ ದೀಪೋತ್ಸವದಂದು ದೀಪ ಹಚ್ಚುತ್ತಾರೆ. ಇದನ್ನು ನೋಡುವುದೇ ಕಣ್ಣಿಗೆ ಹಬ್ಬ.
ವೀಡಿಯೋ ವೀಕ್ಷಿಸಿ
  1 | 2 | 3  >> 
ಫೋಟೋಗ್ಯಾಲರಿ
ಕೊಲ್ಲೂರು ಮೂಕಾಂಬಿಕೆ ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು
ಗುಜರಾತಿನ ಅಂಬಾಭವಾನಿ ಮಂದಿರ
ಖ್ವಾಜಾ-ಮೊಯಿನುದ್ದಿನ್ ಚಿಸ್ತಿ
ಮನದಲ್ಲಿ ನೆನೆದು ನೋಡಿ ಅರುಣಾಚಲೇಶ್ವರನನ್ನ
ರಾಜಸ್ಥಾನದ ಜೈನ ಪುಣ್ಯಕ್ಷೇತ್ರ: ಮಹಾವೀರ ಮಂದಿರ
ಮುಂಬಯಿಯ ಶ್ರೀ ಸಿದ್ಧಿವಿನಾಯಕ ಮಂದಿರ
ಇಂದೋರಿನ ಖಜ್ರಾನಾ ಗಣೇಶ