ಹುಟ್ಟುವ ಮೊದಲೇ ಅತ್ತಿದ್ದ... ವಿಶ್ವದ ಏಕೈಕ ಹಿಂದೂ ರಾಷ್ಟ್ರವಾಗಿದ್ದ ನೇಪಾಳದ ಬಾರಾ ಜಿಲ್ಲೆಯ ರತ್ನಪುರಿ ಗ್ರಾಮದಲ್ಲಿ 1990ರ ಏಪ್ರಿಲ್ 9ರಂದು ಮಾಯಾದೇವಿ ತಮಂಗ್ ಮತ್ತು ಬೀರ್ ಬಹದ್ದೂರ್ ಬಾಂಜನ್ ದಂಪತಿಗೆ ಹುಟ್ಟಿದ್ದ.
ವಿಶೇಷವೆಂದರೆ ಈತ ಹುಟ್ಟುವ ಮೊದಲೇ ಅಳಲು ಶುರು ಮಾಡಿದ್ದ ಎಂದು ನೆರೆ ಮನೆಯವರು ಹೇಳುತ್ತಿದ್ದಾರೆ. ಸಾಧಾರಣವಾಗಿ ಮಗುವೊಂದು ಗರ್ಭದಿಂದ ಸಂಪೂರ್ಣವಾಗಿ ಹೊರಬಿದ್ದ ನಂತರವಷ್ಟೇ ಅಳುತ್ತದೆ. ಆದರೆ ಈತ ಊರಿಡೀ ಕೇಳಿಸುವಂತೆ ಭೂಮಿಗೆ ಬರುವ ಮೊದಲೇ ಅತ್ತಿದ್ದ ಎಂದು ಆತನನ್ನು ಜಗದೋದ್ಧಾರಕ ಎಂದೇ ಕರೆಯುತ್ತಿರುವ ಜನ ಹೇಳುತ್ತಿದ್ದಾರೆ.
ಆತನ ಬಾಲ್ಯವೂ ಎಲ್ಲಾ ಮಕ್ಕಳಂತೆ ಇರಲಿಲ್ಲ. ಗುಂಪಿನೊಂದಿಗಿರದೆ ತಾನೊಂದು ಪ್ರತ್ಯೇಕ ಜೀವಿಯೆಂಬಂತೆ ಸದಾ ಚಿಂತನೆಯಲ್ಲೇ ಮುಳುಗಿರುತ್ತಿದ್ದ. ನಂತರ ವಯಸ್ಸಿಗೆ ಬರುತ್ತಿದ್ದಂತೆ ಹೆಚ್ಚೆಚ್ಚು ಆಧ್ಯಾತ್ಮದತ್ತ ವಾಲತೊಡಗಿದ್ದ. ಆಗಲೇ ಆತನಲ್ಲೊಂದು ದಿವ್ಯಶಕ್ತಿಯಿರುವುದು ಮನೆಯವರ ಗಮನಕ್ಕೂ ಬಂದಿತ್ತು.
ಸಾಮಾನ್ಯ ಮಕ್ಕಳಂತೆ ಅದು ಬೇಕು, ಇದು ಬೇಕೆಂದು ಹಠ ಮಾಡದೆ, ರಚ್ಚೆ ಹಿಡಿಯದೆ ತನ್ನ ಪಾಡಿಗಿರುತ್ತಿದ್ದ ಬಹದ್ದೂರ್ ಕ್ರಮೇಣ ವಯಸ್ಸಿಗೆ ಮೀರಿದ ಪ್ರೌಢತೆಯನ್ನು ತೋರಿಸುತ್ತಿದ್ದ. ಈ ಹೊತ್ತಿನಲ್ಲಿ ಈತ ತನ್ನ ಗುರುಗಳಿಂದ ಪಂಚಶೀಲ ತತ್ವಗಳನ್ನು (ಯಾರಿಗೂ ತೊಂದರೆ ಮಾಡದೇ ಇರುವುದು, ಕಳ್ಳತನ ಮಾಡದೇ ಇರುವುದು, ಸುಳ್ಳು ಹೇಳದೇ ಇರುವುದು, ಮಾದಕ ವಸ್ತುಗಳಿಗೆ ಮೊರೆ ಹೋಗದಿರುವುದು ಮತ್ತು ವೈವಾಹಿಕ ಜೀವನದಲ್ಲಿ ನಿಷ್ಠೆಯನ್ನು ಪಾಲಿಸುವುದು) ಕಲಿತುಕೊಂಡಿದ್ದ.