ಮಾತು ಬಂಗಾರ, ಏಕಾಗ್ರತೆ ಸಿಂಗಾರ... ಇದು ಆತನಿಗೆ ರಕ್ತದಿಂದಲೇ ಬಂದಂತೆ ಭಾಸವಾಗುತ್ತಿದೆ. ಯಾವತ್ತೂ ಜನಸಂದಣಿಯನ್ನು ಇಷ್ಟಪಟ್ಟವನಲ್ಲ, ಪ್ರಶಾಂತ ಸ್ಥಳವೊಂದು ಸಿಕ್ಕಿಬಿಟ್ಟರೆ ದಿನಗಟ್ಟಲೆ, ತಿಂಗಳುಗಟ್ಟಲೆ ತಪಸ್ಸನ್ನು ಮಾಡುತ್ತಾ ಕಾಲ ಕಳೆಯಬಲ್ಲ ವ್ಯಕ್ತಿ ಈ ಬಹದ್ದೂರ್ ಬಾಲ ಬುದ್ಧ.
ಆತ ಕುಳಿತಿರುವ ಮುದ್ರೆಯನ್ನು ನೋಡಿದರೆ ಬುದ್ಧನಂತೆಯೇ ಕಾಣುತ್ತಾನೆ. ತಪಸ್ಸು, ಏಕಾಗ್ರತೆಯಲ್ಲೂ ಅದೇ ಭಂಗಿ. ದಟ್ಟಾರಣ್ಯದಲ್ಲಿ ರಾತ್ರಿ-ಹಗಲು ತಪಸ್ಸು ಮಾಡುತ್ತಿದ್ದರೂ ಯಾವುದೇ ಭಯ, ಆತಂಕವಿಲ್ಲದೆ ಏಕಾಗ್ರತೆಯನ್ನು ಉಳಿಸಿಕೊಳ್ಳಬಲ್ಲ ಸಾಧಕ. ಮಳೆ-ಚಳಿ-ಗಾಳಿಗೂ ಈತ ಬೆದರುವುದಿಲ್ಲ ಎಂದು ಅನುಯಾಯಿಗಳು ವಿವರಣೆ ನೀಡುತ್ತಾರೆ.
ಕೆಲ ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಈತ ಕಾಡಿನ ಮಧ್ಯೆ ಏಳು ಅಡಿಗಳ ಕಂದಕದಲ್ಲಿ ಧ್ಯಾನ ಮುದ್ರೆಯಲ್ಲಿರುವುದನ್ನು ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿದ್ದರು. ತನ್ನ ಅನುಯಾಯಿಗಳಲ್ಲಿ ಸಿಮೆಂಟ್ ಬಂಕರ್ ನಿರ್ಮಿಸಿಕೊಡುವಂತೆ ಸ್ವತಃ ಬಹದ್ದೂರ್ ಸೂಚನೆ ನೀಡಿದ್ದ ಎಂಬುದು ನಂತರ ಬೆಳಕಿಗೆ ಬಂದಿತ್ತು.