ದೇಹದಲ್ಲಿ ಬುದ್ಧನ ಚಿಹ್ನೆಗಳು... ಮೂಲಗಳ ಪ್ರಕಾರ ಈ ಮರಿ ಬುದ್ಧನ ದೇಹದಲ್ಲಿ ಗೌತಮ ಬುದ್ಧನ ದೇಹದಲ್ಲಿದ್ದ ಹಲವು ಚಿಹ್ನೆಗಳಿವೆ. ನೆತ್ತಿಯ ಮೇಲೆ ಓಂ, ಕುತ್ತಿಗೆಯಲ್ಲಿ ಸ್ವಸ್ತಿಕ್, ನಾಭಿಯಲ್ಲಿ ಸೂರ್ಯನ ಗುರುತಿನ ಜತೆಗೆ ಕೂದಲಿನಿಂದ ವಿಶೇಷ ಪ್ರಕಾಶ ಹೊರ ಬರುತ್ತದೆ.
2006ರಲ್ಲಿ ಬೆಂಕಿ ನಡುವೆ ಕುಳಿತೂ ತಪಸ್ಸು ಮಾಡಿದ್ದನ್ನು ಸಾವಿರಾರು ಮಂದಿ ನೋಡಿದ್ದಾರೆ. ಅನುಯಾಯಿಗಳ ಪ್ರಕಾರ ಈತ ಬೋಧಿಸತ್ವ ಹಂತಕ್ಕೆ ತಲುಪಿದ್ದಾನೆ. ಸ್ವತಃ ಬಾಲಬುದ್ಧನೇ ಹೇಳುವ ಪ್ರಕಾರ ಬುದ್ಧನ ಹಂತ ತಲುಪಲು ಇನ್ನೂ ಆರು ವರ್ಷಗಳ ಅಗತ್ಯವಿದೆ.
ಇಲ್ಲಿರುವ ಮತ್ತೊಂದು ಅಚ್ಚರಿಯೆಂದರೆ ಗೌತಮ ಬುದ್ಧ (ಮಾಯಾದೇವಿ) ಮತ್ತು ಈ ಬಾಲ ಬುದ್ಧನ ತಾಯಿಯ ಹೆಸರು (ಮಾಯಾದೇವಿ ತಮಂಗ್) ಒಂದೇ ಆಗಿರುವುದು. ಇಂತಹ ಹತ್ತು ಹಲವು ವಿಚಾರಗಳು ಈತ ಗೌತಮ ಬುದ್ಧನ ಅಪರಾವತಾರ ಎಂದು ನಂಬಲು ಪುಷ್ಠಿ ನೀಡುತ್ತಿವೆ.
ನಾನು ಬುದ್ಧನಲ್ಲ... ಹೀಗೆಂದು ಸ್ವತಃ ಬಹದ್ದೂರ್ ಹೇಳುತ್ತಿದ್ದಾನೆ. ನಾನು ಬುದ್ಧನಲ್ಲ, ಹಾಗೆಂದು ಕರೆಯಬೇಡಿ. ನಾನು ಧರ್ಮಗುರು ಹೌದು. ಮುಂದಿನ ದಿನಗಳಲ್ಲಿ ಬುದ್ಧನಾಗುತ್ತೇನೆ, ಆಗ ಕರೆಯುವಿರಂತೆ ಎಂದು ಅನುಯಾಯಿಗಳಿಗೆ ಸಲಹೆ ನೀಡುತ್ತಾನೆ.
ಮೊತ್ತ ಮೊದಲ ಬಾರಿ ಧಾರ್ಮಿಕ ಸಭೆಯೊಂದನ್ನು ಉದ್ದೇಶಿಸಿ ಪ್ರವಚನ ನೀಡುತ್ತಿದ್ದ ಆತ, ಈ ಜಗತ್ತನ್ನು ರಕ್ಷಿಸಲು ಧರ್ಮದಿಂದ ಮಾತ್ರ ಸಾಧ್ಯ. ನಾನು ಅದಕ್ಕಾಗಿಯೇ ಇರುವವನು. ಯಾರೂ ಧರ್ಮಮಾರ್ಗವನ್ನು ಬಿಡಬೇಡಿ, ಖಂಡಿತಾ ಇದರಲ್ಲಿ ಜಯ ಸಿಕ್ಕೇ ಸಿಗುತ್ತದೆ ಎಂದು ಪ್ರವಚನ ನೀಡಿದ್ದ.
ನಾನು ಬುದ್ಧನಾಗಲಿದ್ದೇನೆ. ಆದರೆ ಅದಕ್ಕಾಗಿ ಇನ್ನೂ ಹೆಚ್ಚಿನ ಜ್ಞಾನ ಸಂಪಾದಿಸುವ ಅಗತ್ಯವಿದೆ. ದಯವಿಟ್ಟು ನನ್ನ ಧ್ಯಾನಕ್ಕೆ ತೊಂದರೆ ಮಾಡಬೇಡಿ. ನನ್ನ ಧ್ಯಾನವು ನನ್ನ ದೇಹ, ಆತ್ಮ ಮತ್ತು ಅಸ್ತಿತ್ವಕ್ಕೆ ಸಂಬಂಧಿಸಿದುದಲ್ಲ. ಈ ಹಂತದಲ್ಲಿ ಅಲ್ಲಿ 72 ಕಾಳಿ ದೇವತೆಗಳಿರುತ್ತಾರೆ. ಅದನ್ನೆಲ್ಲ ಮೀರಿ ನಾನು ಜ್ಞಾನವನ್ನು ಸಂಪಾದಿಸಬೇಕಿದೆ. ಅದುವರೆಗೆ ನಾನು ತಪಸ್ಸು ಮಾಡುವ ಜಾಗಕ್ಕೆ ಯಾರೂ ಬರಬೇಡಿ ಎಂದು ಹೇಳಿದ್ದ.