ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪುಲಿಮೇಡು-ಶಬರಿಮಲೆ ಮಾರ್ಗ ರದ್ದು ಸಾಧ್ಯವೇ?: ಕೋರ್ಟ್ (Sabarimala stampede | Pulmedu | Periyar Tiger Reserve | Kerala Police)
ಶಬರಿಮಲೆ ಕಾಲ್ತುಳಿತ ಸಂಬಂಧ ಹೈಕೋರ್ಟಿಗೆ ತಮ್ಮ ವರದಿ ಸಲ್ಲಿಸಿರುವ ಕೇರಳ ಪೊಲೀಸರು, ತಮ್ಮಿಂದಾಗಿ ದುರಂತ ಸಂಭವಿಸಿಲ್ಲ. ನಾವು ಸಾಕಷ್ಟು ಭದ್ರತೆಯನ್ನು ಅಲ್ಲಿ ನಿಯೋಜಿಸಿದ್ದೆವು ಎಂದು ಹೇಳಿ ಕೈ ತೊಳೆದುಕೊಂಡಿದೆ. ಅದೇ ಹೊತ್ತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಲಯವು, ಪುಲಿಮೇಡು ಮೂಲಕ ಶಬರಿಮಲೆಗೆ ತೆರಳುವ ಮಾರ್ಗವನ್ನು ರದ್ದು ಮಾಡಲು ಸಾಧ್ಯವಿದೆಯೇ ಎಂದು ಪರಿಶೀಲನೆ ನಡೆಸುವಂತೆ ಸರಕಾರಕ್ಕೆ ಆದೇಶ ನೀಡಿದೆ.
ಇಂದು ಬೆಳಿಗ್ಗೆ ಹೈಕೋರ್ಟಿಗೆ ತೆರಳಿದ ಕೇರಳ ಪೊಲೀಸ್ ಮಹಾ ನಿರ್ದೇಶಕ ಜಾಕೊಬ್ ಪುನ್ನೋಸ್ ಮತ್ತು ತ್ರಿವಾಂಕೂರ್ ದೇವಸ್ವಂ ಮಂಡಳಿ ಅಧಿಕಾರಿಗಳು, ಜನವರಿ 14ರಂದು ರಾತ್ರಿ ಹೊತ್ತು ಸಂಭವಿಸಿದ ದುರಂತದ ವರದಿಯನ್ನು ಸಲ್ಲಿಸಿದರು.
'ನಾವು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ್ದೇವೆ. ಪುಲಿಮೇಡುವಿನಲ್ಲಿ 279 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಅದು ಹುಲಿ ರಕ್ಷಿತಾರಣ್ಯವಾಗಿದ್ದ ಕಾರಣ, ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಅನುಮತಿ ಪೊಲೀಸರಿಗೆ ಸಿಕ್ಕಿರಲಿಲ್ಲ' ಎಂದು ಪೊಲೀಸರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
'ಪುಲಿಮೇಡುವಿನಲ್ಲಿ 60 ಅರಣ್ಯಾಧಿಕಾರಿಗಳನ್ನು ನೇಮಕ ಮಾಡಲಾಗಿತ್ತು' ಎಂದು ಅರಣ್ಯ ಇಲಾಖೆಯು ಹೈಕೋರ್ಟಿಗೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ.
102 ಶಬರಿಮಲೆ ಯಾತ್ರಾರ್ಥಿಗಳ ಸಾವಿಗೆ ಕಾರಣವಾಗಿದ್ದ ದುರಂತದ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಕೇರಳ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್, ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಿ ಎಂದು ಆದೇಶ ನೀಡಿತ್ತು.
'ಶಬರಿಮಲೆಗೆ ವರ್ಷಂಪ್ರತಿ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಇವರಿಗೆ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸುವ ಮತ್ತು ಸುಧಾರಣೆಯನ್ನು ತರುವ ಸಲುವಾಗಿ ನಾವು ಹಲವಾರು ಬಾರಿ ಮನವಿ ಮಾಡಿಕೊಂಡರೂ, ಅನುಮತಿಯನ್ನು ನಿರಾಕರಿಸಲಾಗಿದೆ. ಇದಕ್ಕೆ ಕಾರಣ ಈ ಪ್ರದೇಶ ಹುಲಿ ರಕ್ಷಿತಾರಣ್ಯವಾಗಿರುವುದು. ಹಾಗಾಗಿ ದೇವಸ್ವಂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿಲ್ಲ' ಎಂದು ದೇವಸ್ವಂ ತನ್ನ ಕ್ರಮಗಳನ್ನು ಸಮರ್ಥಿಸಿಕೊಂಡಿದೆ.
ರದ್ದು ಮಾಡಲು ಸಾಧ್ಯವೇ? ಮೂಲಭೂತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಸರಕಾರಕ್ಕೆ ಅಸಾಧ್ಯ ಎನ್ನುವುದಾದರೆ, ಪುಲಿಮೇಡು ಮೂಲಕ ತೆರಳಲು ಯಾತ್ರಾರ್ಥಿಗಳಿಗೆ ಅವಕಾಶ ನಿರಾಕರಿಸಬಹುದಲ್ಲವೇ? ಈ ದಾರಿಯನ್ನು ಯಾಕೆ ಮುಚ್ಚಬಾರದು ಎಂದು ಹೈಕೋರ್ಟ್ ಸರಕಾರವನ್ನು ಪ್ರಶ್ನಿಸಿದೆ.
ಇಡುಕ್ಕಿ ಜಿಲ್ಲೆಯ ವೆಂಡಿಪಿರಿಯಾರ್ ಬಳಿಯ ಪುಲಿಮೇಡು ಮೂಲಕ ಲಕ್ಷಾಂತರ ಭಕ್ತರು ಪ್ರಸಕ್ತ ಶಬರಿಮಲೆಗೆ ತೆರಳುತ್ತಿದ್ದಾರೆ. ಶಬರಿಮಲೆಗೆ ತೆರಳಲು ಇರುವ ಇನ್ನೊಂದು ಮಾರ್ಗ ಪಂಪೆಯ ಮೂಲಕ. ಸುರಕ್ಷಿತ ಮಾರ್ಗ ಪಂಪೆ. ಪುಲಿಮೇಡು ರಕ್ಷಿತಾರಣ್ಯವಾಗಿರುವುದರಿಂದ ಅಲ್ಲಿ ಯಾವುದೇ ಕಾಮಗಾರಿಗಳನ್ನು ನಡೆಸುವುದು ಅಸಾಧ್ಯ ಎಂದು ಸರಕಾರ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿತ್ತು.
ಹಾಗಾಗಿ ಆ ಮಾರ್ಗವನ್ನೇ ರದ್ದು ಪಡಿಸುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೋರ್ಟ್ ಸಲಹೆ ಮಾಡಿದೆ. ಅಲ್ಲದೆ, ದುರ್ಗಮ ಹಾದಿಯಲ್ಲಿ ಸಾವಿರಕ್ಕಿಂತ ಹೆಚ್ಚಿನ ವಾಹನಗಳನ್ನು ಹೋಗಲು ಅವಕಾಶ ನೀಡಿದ್ದು ಯಾಕೆ ಎಂದೂ ಪ್ರಶ್ನಿಸಿದೆ.