ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಪ್ರಧಾನಿಯಾದ್ರೆ ಮಾತ್ರ ನನ್ನನ್ನು ಲೆಕ್ಕಕ್ಕೆ ತಗೊಳ್ಳಿ: ತೃ.ರಂಗಕ್ಕೆ ಮಾಯಾ
ಮತಸಮರ
PTI
ಕಾಂಗ್ರೆಸ್ ಮತ್ತು ಬಿಜೆಪಿ ಶಕ್ತಿಗಳಿಗೆ ಪರ್ಯಾಯವಾಗಿ ರೂಪುಗೊಂಡಿರುವ ಎಡಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳ ಒಕ್ಕೂಟ ತೃತೀಯ ರಂಗಕ್ಕೆ ನೇತಾರ ಯಾರು ಎಂಬ ಲೆಕ್ಕಾಚಾರ ಆರಂಭವಾಗುವ ಮುನ್ನವೇ ಅಡ್ಡ ಧ್ವನಿಯೊಂದು ಕೇಳಿಬಂದಿದೆ. ತನ್ನನ್ನು ಪ್ರಧಾನಮಂತ್ರಿ ಪದವಿ ಅಭ್ಯರ್ಥಿ ಎಂದು ಘೋಷಿಸಿದರೆ ಮಾತ್ರವೇ ತೃತೀಯ ರಂಗ ಸೇರಿಕೊಳ್ಳುವುದಾಗಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರು ಬಳಿಯ ದಾಬಸ್‌ಪೇಟೆಯಲ್ಲಿ ಗುರುವಾರ ನಡೆದ ತೃತೀಯ ರಂಗದ ಉದ್ಘಾಟನಾ ಸಮಾರಂಭದಲ್ಲಿ ಮಾಯಾವತಿಯವರು ಪಕ್ಷದ ಪ್ರತಿನಿಧಿಯಾಗಿ ಕಳುಹಿಸಿದ್ದ ಸತೀಶ್ ಚಂದ್ರ ಅವರ ಮಾತುಗಳಿಂದ ಈ ಅಂಶ ಮನದಟ್ಟಾಗುತ್ತಿತ್ತು. ಅವರು ತಮ್ಮ ಭಾಷಣದಲ್ಲಿ ಪದೇಪದೇ, 'ಮಾಯಾವತಿಯನ್ನು ಪ್ರಧಾನಿ ಮಾಡುವುದು ಬಿಎಸ್ಪಿಯ ಏಕೈಕ ಗುರಿ' ಎಂದು ಹೇಳುತ್ತಿದ್ದರು.

ಸಿಪಿಐ, ಸಿಪಿಎಂ, ಜೆಡಿಎಸ್, ಟಿಡಿಪಿ, ಟಿಆರ್ಎಸ್, ಆರ್ಎಸ್ಪಿ, ಫಾರ್ವರ್ಡ್ ಬ್ಲಾಕ್ ಮತ್ತು ಭಜನ್ ಲಾಲ್ ಅವರ ಹರ್ಯಾಣ ಜನಹಿತ ಪಕ್ಷಗಳಿರುವ ತೃತೀಯ ರಂಗಕ್ಕೆ ಬಿಎಸ್ಪಿ ಮತ್ತು ಎಐಎಡಿಎಂಕೆಗಳೂ ಒಳಗೆ-ಹೊರಗೆ ಕಾಲಿರಿಸಿಕೊಂಡಿವೆ. ತೃತೀಯ ರಂಗದ ಇದುವರೆಗಿನ ನಿರ್ಧಾರವೆಂದರೆ ಪ್ರಧಾನಿ ಅಭ್ಯರ್ಥಿಯನ್ನು ಲೋಕಸಭೆ ಚುನಾವಣೆಗಳ ಬಳಿಕವಷ್ಟೇ ತೀರ್ಮಾನಿಸಲಾಗುತ್ತದೆ.

ಆದರೆ, ಮಾರ್ಚ್ 15ರಂದು ಬಿಎಸ್ಪಿ ಮಾಯಾವತಿ ಜೊತೆಗೆ ತೃತೀಯ ರಂಗದ ಮಾತುಕತೆ ನಡೆಯಲಿದ್ದು, ಈ ಸಂದರ್ಭ ಪ್ರಧಾನಿ ಅಭ್ಯರ್ಥಿ ಕುರಿತಾಗಿಯೂ ಚರ್ಚೆ ನಡೆಯಲಿದೆ ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಮಾರ್ಚ್ 15ರಂದು ಬಿಎಸ್ಪಿ ಸಂಸ್ಥಾಪಕ ಕಾನ್ಶಿರಾಂ ಅವರ ಜನ್ಮದಿನವೂ ಆಗಿದ್ದು, ಆ ದಿನ ನವದೆಹಲಿಯ ತಮ್ಮ ನಿವಾಸಕ್ಕೆ ತೃತೀಯ ರಂಗದ ಮುಖಂಡರನ್ನು ಮಾಯಾವತಿ ಆಹ್ವಾನಿಸಿದ್ದಾರೆ. ನಾಯ್ಡು ಮತ್ತು ದೇವೇಗೌಡ 'ನಾವು ಪ್ರಧಾನಿ ಅಭ್ಯರ್ಥಿಯಲ್ಲ' ಎಂದು ಈಗಾಗಲೇ ಘೋಷಿಸಿಬಿಟ್ಟಿದ್ದಾರೆ.

ಒರಿಸ್ಸಾದಲ್ಲಿ ಬಿಜೆಪಿಗೆ ಕೈಕೊಟ್ಟಿರುವ ಬಿಜೆಡಿಯೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಸಿಪಿಐ ನಾಯಕ ಎ.ಬಿ.ಬರ್ಧಾನ್ ತಿಳಿಸಿದ್ದಾರೆ. ಮತ್ತೊಂದೆಡೆ ಎಐಎಡಿಎಂಕೆ ನಾಯಕಿ ಕೂಡ ತೃತೀಯ ರಂಗ ಸಮಾವೇಶಕ್ಕೆ ಗೈರು ಹಾಜರಾಗಿ, ತಮ್ಮ ಪ್ರತಿನಿಧಿ ಮೈತ್ರೇಯನ್ ಅವರನ್ನು ಕಳುಹಿಸಿಕೊಟ್ಟಿದ್ದರು. ತಮಿಳುನಾಡಿನಲ್ಲಿ ಆಕೆ ಪ್ರತಿಭಟನೆಯಲ್ಲಿ ಬ್ಯುಸಿ ಆಗಿರುವುದರಿಂದ ಬರಲಾಗುತ್ತಿಲ್ಲ ಎಂದು ಪತ್ರ ಕಳುಹಿಸಿರುವುದಾಗಿ ದೇವೇಗೌಡರು ಹೇಳಿದ್ದಾರೆ.

ತೃತೀಯ ರಂಗದ ಭವಿಷ್ಯ ಏನು ಎಂಬುದು ಮಾರ್ಚ್ 15ರಂದು ಮಾಯಾ ಸಭೆಯ ಸಂದರ್ಭ ಸ್ವಲ್ಪ ಮಟ್ಟಿಗೆ ತಿಳಿದುಬರಲಿದೆ.