ಪಾಕಿಸ್ತಾನದಲ್ಲಿ ಯಾಕ್ರೀ ಸುಮ್ನಿದ್ರಿ?: ಕೃಷ್ಣಗೆ ಬಿಜೆಪಿ ಪ್ರಶ್ನೆ
ನವದೆಹಲಿ, ಗುರುವಾರ, 5 ಆಗಸ್ಟ್ 2010( 14:30 IST )
ಇಸ್ಲಾಮಾಬಾದ್ನಲ್ಲಿ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾರತದ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈಯವರ ವಿರುದ್ದ ಪಾಕಿಸ್ತಾನದ ವಿದೇಶಾಂಗ ಸಚಿವರು ಟೀಕಿಸುತ್ತಿದ್ದ ಹೊತ್ತಿನಲ್ಲಿ ಮೌನ ವಹಿಸಿದ್ದು ಯಾಕೆ ಎಂದು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರನ್ನು ಬಿಜೆಪಿ ನೇರವಾಗಿ ಪ್ರಶ್ನಿಸಿದೆ.
ರಾಜ್ಯಸಭೆಯಲ್ಲಿ ನಡೆಯುತ್ತಿದ್ದ ಪ್ರಶ್ನೋತ್ತರ ವೇಳೆಯಲ್ಲಿ ರಾಜ್ಯಸಭೆ ಪ್ರತಿಪಕ್ಷದ ಉಪನಾಯಕ (ಬಿಜೆಪಿ) ಎಸ್.ಎಸ್. ಅಹ್ಲುವಾಲಿಯಾ ಅವರು ಪ್ರಶ್ನೆಯೊಂದನ್ನು ಕೇಳುತ್ತಾ, ಭಾರತದ ಅಧಿಕಾರಿಯೊಬ್ಬರನ್ನು ಸಾರ್ವಜನಿಕವಾಗಿ ಆ ರೀತಿ ಪಾಕ್ ಸಚಿವರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾಗ ನೀವ್ಯಾಕೆ ಸುಮ್ಮನಿದ್ದಿರಿ ಎಂದಿದ್ದರು.
ಆದರೆ ಇದಕ್ಕೆ ತನ್ನ ಎಂದಿನ ಶೈಲಿಯಂತೆ ಸಚಿವ ಕೃಷ್ಣ ಹಾರಿಕೆಯ ಉತ್ತರ ನೀಡಿದ್ದಾರೆ. ಪಾಕಿಸ್ತಾನ ವರ್ತಿಸಿದ ರೀತಿಯಲ್ಲಿ ಭಾರತವೂ ವರ್ತಿಸಲು ಸಾಧ್ಯವಿಲ್ಲ. ಆ ಸಂದರ್ಭದಲ್ಲಿ ನಾನು ಯಾವ ಉತ್ತರ ನೀಡುತ್ತಿದ್ದರೂ ಪ್ರಯೋಜನಕ್ಕೆ ಬರುತ್ತಿರಲಿಲ್ಲ ಎಂದು ಅವರು ಉತ್ತರಿಸಿದ್ದಾರೆ.
ಉತ್ತರಿಸುವ ಸಂದರ್ಭದಲ್ಲಿ ಪಾಕಿಸ್ತಾನವನ್ನು ಮಿತ್ರರಾಷ್ಟ್ರ ಎಂದೇ ಉಲ್ಲೇಖಿಸಿದ ಕೃಷ್ಣ, ಭಾರತದ ಗೃಹಸಚಿವರನ್ನು ಭಯೋತ್ಪಾದಕರ ಜತೆ ಹೋಲಿಸಿರುವ ಪಾಕ್ ನಡೆ ಹಾಸ್ಯಾಸ್ಪದ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಅವರ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡ ರೀತಿಯಲ್ಲೇ, ಅಷ್ಟೇ ಕೆಳಮಟ್ಟಕ್ಕಿಳಿದು ವಿರೋಧಿಸುವುದು ನಮಗೆ ಹೇಳಿದ್ದಲ್ಲ ಎಂದರು.
ಪಕ್ಕದ ರಾಷ್ಟ್ರದ ಜತೆಗಿನ ಇತ್ಯರ್ಥವಾಗದೇ ಉಳಿದಿರುವ ಎಲ್ಲಾ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸುವ ಕುರಿತು ಪ್ರಸ್ತಾಪ ನಡೆಸಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದ್ದಾರೆ.
ನಾವು ಯಾವುದೇ ವಿಚಾರದಲ್ಲಿ ಹಿಂಜರಿಯುತ್ತಿಲ್ಲ. ಭಾರತವು ಎಲ್ಲಾ ವಿಚಾರಗಳನ್ನು ಚರ್ಚಿಸಲು ಬದ್ಧವಾಗಿದೆ ಎಂಬುದನ್ನು ರಾಷ್ಟ್ರ ಅರ್ಥ ಮಾಡಿಕೊಳ್ಳಬೇಕಿದೆ. ಎಲ್ಲಾ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸಿಕೊಂಡು ಹೋಗಬೇಕಾಗಿದೆ. ಆದರೆ ಗಡಿಯಾಚೆಗಿನ ಭಯೋತ್ಪಾದನೆ ಸ್ಥಗಿತಗೊಳ್ಳಬೇಕಾದ ಅನಿವಾರ್ಯತೆಯಿದೆ ಎಂದರು.