ಸ್ಯಾಂಡಲ್ವುಡ್ನಲ್ಲಿ ಈಗಷ್ಟೇ ಘರ್ಜಿಸಿರುವ 'ಹುಲಿ', 'ಬೆಳಗಾಂ'ನತ್ತ ಪ್ರಯಾಣ ಬೆಳೆಸಿರುವಾಗಲೇ 'ಮಾತೃಭೂಮಿ' ಬೇಕೇ ಬೇಕು ಎನ್ನುತ್ತಾ ಅದರ ರಕ್ಷಣೆಗೆ ನಿಂತಿದೆ.
ಇದೆಲ್ಲಾ ಏನು ಅಂತೀರಾ... ಇದೆಲ್ಲಾ ನಟ ಕಿಶೋರ್ ಮಹಿಮೆ. ಇದೇ 17ರಂದು ಬಿಡುಗಡೆಯಾಗಿ ಒಂದು ವರ್ಗದ ಜನರಲ್ಲಿ ಸೈ ಎನಿಸಿಕೊಂಡಿರುವ ಓಂಪ್ರಕಾಶ್ ನಿರ್ದೇಶನದ 'ಹುಲಿ' ಚಿತ್ರತಂಡವೀಗ 'ಬೆಳಗಾಂ' ಹೆಸರಿನ ಮತ್ತೊಂದು ಚಿತ್ರದ ಚಿತ್ರೀಕರಣ ನಡೆಸುತ್ತಿದೆ. ಅದರ ನಡುವೆಯೇ ಇನ್ನೊಂದು ಚಿತ್ರಕ್ಕೆ ಕಿಶೋರ್ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಕಿಶೋರ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಮತ್ತೊಂದು ಚಿತ್ರದ ಹೆಸರು 'ಮಾತೃಭೂಮಿ'. ಇದರ ನಿರ್ದೇಶಕರು ಓಂಪ್ರಕಾಶ್ ಅಲ್ಲ. ಕೃಷ್ಣೇಗೌಡರು. ಈ ಹಿಂದೆ 'ದಾದಾಗಿರಿ', 'ಬಣ್ಣದ ಹೆಜ್ಜೆ' ಹಾಗೂ 'ಅಮಾಸ' ಚಿತ್ರಗಳನ್ನು ನಿರ್ದೇಶಿಸಿ ಗಾಂಧಿನಗರಕ್ಕೆ ಪರಿಚಯವಾದವರು.
'ಮಾತೃಭೂಮಿ' ನಿರ್ಮಾಪಕ ವೀರಕುಮಾರ್. ಅಶ್ವಿನಿ ಮತ್ತು ಸವಿಮಾದ್ (ಪ್ರಿಯಾಂಕ) ನಾಯಕಿಯರು. ಇದರೊಂದಿಗೆ ಸತತ ಮೂರು ಚಿತ್ರಗಳಲ್ಲಿ ನಾಯಕ ಪಾತ್ರಗಳು ಕಿಶೋರ್ ಅವರಿಗೆ ದೊರೆತಂತಾಗಿದೆ.
'ಮಾತೃಭೂಮಿ' ಮರ್ಡರ್ ಮಿಸ್ಟರಿ ಚಿತ್ರ. ಕಿಶೋರ್ ಇಲ್ಲಿ ಮತ್ತೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆಗ ತಾನೇ ಜನಿಸಿದ ಮಗುವೊಂದು ಕಾಣೆಯಾದ ನಂತರ ಅದರ ಜಾಡು ಹಿಡಿದು ಹೋಗುವ ಪೊಲೀಸ್ ಅಧಿಕಾರಿಗೆ ಎದುರಾಗುವ ಸವಾಲುಗಳೇ ಚಿತ್ರದ ಕಥಾವಸ್ತು ಎಂಬ ವಿವರವನ್ನು ನಿರ್ದೇಶಕ ಕೃಷ್ಣಗೌಡ ನೀಡಿದ್ದಾರೆ.
'ಮಾತೃಭೂಮಿ' ಚಿತ್ರಕ್ಕೆ 'ತಾಯಿಯಷ್ಟೇ ಅನಿವಾರ್ಯ' ಎಂಬ ಅಡಿಬರಹ ಸಹ ಇದೆ. ರಮೇಶ್ ಭಟ್, ಸುಧಾರಾಣಿ, ಶೋಭರಾಜ್ ಮತ್ತಿತರರು ತಾರಾಬಳಗದಲ್ಲಿದ್ದಾರೆ. ಛಾಯಾಗ್ರಹಣ, ಕೆ.ಎಸ್. ಕೆಂಪರಾಜು ಸಂಕಲನ ಚಿತ್ರಕ್ಕಿದೆ.
ಈ ಚಿತ್ರದ ಮೂಲಕ ಹಿನ್ನೆಲೆ ಗಾಯಕಿ ಎಂ.ಡಿ. ಪಲ್ಲವಿ ಅವರು ಸಂಗೀತ ನಿರ್ದೇಶಕಿಯಾಗಲಿದ್ದಾರೆ ಎಂಬ ಮಾತಿದೆ. ಆದರೆ, ಪಲ್ಲವಿ ಮಾತ್ರ, ನಾನು ಯಾವ ಚಿತ್ರಕ್ಕೂ ಸಂಗೀತ ನೀಡುತ್ತಿಲ್ಲ. ನನ್ನನ್ನೂ ಯಾರೂ ಸಂಪರ್ಕಿಸಿಲ್ಲ ಎಂದಿದ್ದಾರೆ.