ಕನ್ನಡ ಚಲನಚಿತ್ರ ಕಾರ್ಮಿಕರ ಒಕ್ಕೂಟದ ನಾಯಕ, ಪುಟ್ಟಣ್ಣ ಕಣಗಾಲ್ ಅವರ 'ರಂಗನಾಯಕಿ'ಯ ನಾಯಕ ಅಶೋಕ್ ಈಗ ಹೊಸ ಪ್ರಾಜೆಕ್ಟ್ಗೆ ಕೈ ಹಾಕಿದ್ದಾರೆ. ಇಲ್ಲೂ ಕಾರ್ಮಿಕರ, ಕಲಾವಿದರ ಏಳ್ಗೆ ಬಯಸಿ 'ಅಂಗಡಿ' ತೆರೆಯಲಿದ್ದಾರೆ. ಅಂಗಡಿ ಎಂದರೆ ಸಾಧಾರಣವಾದ ಪೆಟ್ಟಿಗೆ ಅಂಗಡಿಯಾಗಲಿ, ದಿನಸಿ ಮಾರುವ ಕಿರಾಣಿ ಅಂಗಡಿಯಲ್ಲ.
MOKSHA
ಅವರು ಮಾಡಲು ಹೊರಟಿರುವುದು 'ಕಥೆ ಅಂಗಡಿ' ಅರ್ಥಾತ್ 'ಸ್ಟೋರಿ ಶಾಪ್'. ಇದೊಂದು ಹೊಸ ಕಾನ್ಸೆಪ್ಟ್! ಮತ್ತೊಬ್ಬ ಹಿರಿಯ ನಟ ಶಿವರಾಮ್ ಫಿಲಂ ಇನ್ಸಿಟಿಟ್ಯೂಟ್ ತೆರೆಯುತ್ತದ್ದಂತೆ, ಇತ್ತ ಅಶೋಕ್ 'ಕಥೆ ಅಂಗಡಿ' ಮಾಲೀಕರಾಗುವ ಮೂಲಕ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಸಹಕಾರಿಯಾಗುವ 'ಕನಸು' ಬಿಚ್ಚಿಟ್ಟಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ರಿಮೇಕ್ ಚಿತ್ರಗಳು ಗೆದ್ದರೂ, ಅದರಲ್ಲಿ ನಮ್ಮದು ಎಂಬ ಸ್ವಂತಿಕೆ ಇರುವುದಿಲ್ಲ. ಅದಕ್ಕಾಗಿಯೇ 'ಕಥೆ ಅಂಗಡಿ' ಆರಂಭಿಸಿ, ಅಲ್ಲೊಂದಿಷ್ಟು ಕನ್ನಡದ ಸೊಗಡು ತುಂಬುವ ಕೆಲಸ ಮಾಡುವ ಪ್ರಯತ್ನ ಮಾಡುತ್ತಿರುವುದಾಗಿ ಅಶೋಕ್ ಹೇಳಿದ್ದಾರೆ.
ಈ ಅಂಗಡಿಯಲ್ಲಿ ಯುವ ಬರಹಗಾರರಿಗೆ, ಕಥೆಗಾರರಿಗೆ ಹಾಗೂ ಕಾದಂಬರಿಕಾರರಿಗೆ ಸರಿಯಾದ ವೇದಿಕೆ ಇದಾಗಲಿದೆ. ಕಥೆ ಅಂಗಡಿಯ ಪ್ರತಿಭಾವಂತ ಬರಹಗಾರರಿಂದ ಒಳ್ಳೆಯ ಹಾಗೂ ಚಿತ್ರ ನಿರ್ಮಿಸುವಂಥ ಕಥೆಗಳನ್ನು ಬರೆಯಿಸಿಕೊಳ್ಳಬಹುದು.
ಅಂತಹ ಅರ್ಹ ಕಥೆಗಳನ್ನು ಅಸಕ್ತ ನಿರ್ಮಾಪಕರಿಗೆ ಹೇಳುವುದು, ಅವರು ಇಷ್ಟಪಟ್ಟು ಒಪ್ಪಿಕೊಂಡರೆ, ಚಿತ್ರಕಥೆ, ಸಂಭಾಷಣೆ ಸಮೇತ ಸಿನಿಮಾ ಮಾಡಲು ಅದನ್ನು ಸಿದ್ಧಪಡಿಸಿ ಕೊಡಲಾಗುತ್ತದೆ. ಅದಕ್ಕೆ ಇಂತಿಷ್ಟು ಸಂಭಾವನೆ ಪಡೆದು, ಆಯಾ ಬರಹಗಾರರಿಗೆ ತಲುಪಿಸುವುದು 'ಕಥೆ ಅಂಗಡಿ' ಉದ್ದೇಶ.
ತೆಲುಗು, ತಮಿಳು ಚಿತ್ರರಂಗಗಳಿಗೆ ದೊಡ್ಡ ಮಾರುಕಟ್ಟೆ ಇದೆ. ಇನ್ನು ಮರಾಠಿ, ಮಲಯಾಳಿ ಚಿತ್ರರಂಗಕ್ಕೂ ತನ್ನದೇ ಆದ ಸ್ವಂತಿಕೆ ಇದೆ. ಇಲ್ಲಿ ಕೆಟ್ಟಿರುವುದು ನಾವೇ. ಸರ್ಕಾರವನ್ನು ಕನ್ನಡ ಚಿತ್ರಗಳಿಗೆ ಸಹಾಯಧನ ಕೊಡಿ ಎಂದು ಬೇಡುತ್ತಿರುವವರು ನಾವೇ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಕನ್ನಡ ಚಿತ್ರ ಕಾರ್ಮಿಕರಿಗೆ, ಬರಹಗಾರರಿಗೆ ಇನ್ನೆನಾದರೂ ನನ್ನಿಂದ ಮಾಡಲು ಸಾಧ್ಯವೇ ಎಂದು ಯೋಚಿಸಿ ಈ ಯೋಜನೆ ತಯಾರಿಸಿದ್ದೇನೆ.
'ಕಥೆ ಅಂಗಡಿ'ಯಲ್ಲಿ ಸಿಗುವ ಕಥೆಗಳು ಕೇವಲ ಕನ್ನಡಕ್ಕೆ ಮಾತ್ರ ಸೀಮೀತವಲ್ಲ. ಪರಭಾಷಿಗರೂ ಬಂದು ಕಥೆ ಕೇಳಿದರೆ ಮಾರಾಟ ಮಾಡುತ್ತೇವೆ. ಅಲ್ಲೂ ಕನ್ನಡದ ಸೊಗಡು ಹರಡುವಂತೆ ಮಾಡುವ ಪ್ರಯತ್ನ ನಮ್ಮದು ಎಂದಿದ್ದಾರೆ ಅಶೋಕ್.