ಬಿ.ಎಸ್.ಯಡಿಯೂರಪ್ಪ ದುರ್ಬಲ ಮುಖ್ಯಮಂತ್ರಿ ಎಂದು ಬಿಜೆಪಿ ವಿರುದ್ಧ ಮುನಿಸಿಕೊಂಡು ದೂರವಾಗಿರುವ ಮಾಜಿ ಸಚಿವ ಬೆಂಕಿ ಮಹಾದೇವ್ ಆರೋಪಿಸಿದ್ದು,ಬಿಜೆಪಿಗೆ ಇವರೇ ಕೊನೆಯ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಎಲ್ಲಾ ರಂಗದಲ್ಲೂ ವಿಫಲರಾಗಿದ್ದಾರೆ. ಒಂದು ರೀತಿ ಖಾಸಗಿ ಕಂಪನಿಯಂತೆ ಸರ್ಕಾರವನ್ನು ನಡೆಸುತ್ತಿದ್ದಾರೆ ಎಂದು ದೂರಿದರು. ಇನ್ನು ಮೂರು ವರ್ಷಗಳ ನಂತರ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ 50ವರ್ಷ ಕಾಯಬೇಕು. ಇನ್ನು ಮುಂದೆ ಲಿಂಗಾಯಿತರು ಸಹ ಯಡಿಯೂರಪ್ಪನವರನ್ನು ಬೆಂಬಲಿಸುವುದಿಲ್ಲ ಎಂದರು.
ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಅತೀಯಾಗಿದ್ದು, ಇದಕ್ಕೆ ಮಂತ್ರಿಗಳ ಬೆಂಬಲವೇ ಹೆಚ್ಚಾಗಿದೆ. ಆ ನಿಟ್ಟಿನಲ್ಲಿ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಜನರೇ ಪಾಠ ಕಲಿಸಬೇಕೆಂದು ಕರೆ ನೀಡಿದರು.
ಅಲ್ಲದೇ ತಾನು ರಾಜಕೀಯ ಸನ್ಯಾಸ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಮಹಾದೇವ್, ನಾನು ಯಾವ ಪಕ್ಷಕ್ಕೆ ಸೇರಬೇಕೆಂದು ಇನ್ನೂ ನಿರ್ಧಾರ ಮಾಡಿಲ್ಲ. ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.