ಚೆಲುವು ಒಲವಿನ ಆಗುಂಬೆಯ ನೋಡಬನ್ನಿ
|
|
|
|
|
|
|
|
|
|
ಸುಮಾರು ನಾಲ್ಕೈದು ವರ್ಷಗಳ ಹಿಂದೆ ನಮ್ಮ ಸ್ನೇಹಿತರ ದಂಡು ಆಗುಂಬೆಯಲ್ಲಿರುವ ಬರ್ಕಣದಲ್ಲಿ ಒಂದು ರಾತ್ರಿ ಶಿಬಿರ ಹೂಡಿದ್ದನ್ನು ಇಲ್ಲಿ ನಾನು ನೆನಪಿಸಿಕೊಳ್ಳಲೇ ಬೇಕು. ಡಾ| ರಾಜ್ ಮತ್ತು ಮಾಧವಿ ನಟಿಸಿರುವ ಆಕಸ್ಮಿಕ ಚಿತ್ರದ ಕೆಲವು ದೃಶ್ಯಗಳ ಚಿತ್ರೀಕರಣ ಇಲ್ಲೇ ನಡೆದಿತ್ತು. ಚಿತ್ರೀಕರಣಕ್ಕಾಗಿ ಹಾಕಿದ್ದ ಮರದ ಸೆಟ್ಗಳೇ ಆ ವೇಳೆ ನಮ್ಮ ವಾಸ್ತವ್ಯವಾಗಿತ್ತು.
ಪುಕ್ಕಲ ಮೂರ್ತಿ, 'ಡೋಂಟ್ ವರಿ ಐಯಾಮ್ ದೇರ್' ಎನ್ನುತ್ತ ಕೈಬೀಸುವ ರಾಜು, ರುಚಿಕಟ್ಟಾದ ಅಡುಗೆ ತಯಾರಿಯ ಪಾಕ ಪ್ರಾವಿಣ್ಯತೆಯನ್ನು ಕರಗತಮಾಡಿಕೊಂಡಿರುವ ಹರೀಶ್, ನಗುವ ನಗಿಸುವ ಕಲಾ ವಲ್ಲಭ ಸಲಾಂ, ಹುಟ್ಟುತ್ತಲೇ ತುಂಟತನದೊಂದಿಗೆ ನೆಲಕ್ಕೆ ಉದುರಿರುವ ರೇಖ, ಮೌನಿ ರೂಪ, ಎಲ್ಲರ ಹಾಸ್ಯ, ವಿನೋದಗಳಿಗೆ ಮುಖ್ಯವಸ್ತುವಾಗಿ ನಗೆಗೆ ವಸ್ತುವಾಗುವ ನಾನು, ನಾಯಕತ್ವದ ಗಾಂಭೀರ್ಯದ ಜ್ಯೋತಿ, ಎಲ್ಲರೂ ತೆರಳಿದ್ದೆವು ನೋಡಿ ಅಲ್ಲಿಗೆ. ಪ್ರಕೃತಿಯ ಮಡಿಲಲ್ಲಿ ಕಳೆದ ಆ ಒಂದು ದಿನ ಮಾತ್ರ ಎಂದೆಂದಿಗೂ ಅಲ್ಲಿನ ಕಾಡಿನಂತೆ ಸದಾ ಹಸಿರು.
ಸುಂದರ ಸೂರ್ಯಾಸ್ತವನ್ನು ಸವಿದು, ನಮ್ಮೊಡನೆ ಒಯ್ದಿದ್ದ ಸಾಮಾಗ್ರಿಗಳನ್ನು ಜೋಡಿಸಿ ಅಡುಗೆ ತಯಾರಿಸಿ ತಿಂದುಂಡು, ಕಾಡುಪ್ರಾಣಿಗಳು ಹತ್ತಿರ ಬರದಂತೆ ತಡೆಯಲು ಅಗ್ಗಿಷ್ಟಿಕೆಯನ್ನು ಹಾಕಿದ್ದೆವು. ಹಾಡು, ಡ್ಯಾನ್ಸ್ಗಳಿಗೂ ಕಮ್ಮಿ ಇರಲಿಲ್ಲ. ಬೆಂಕಿ ಬಳಿ ಯಾವುದೇ ಕಾಡುಪ್ರಾಣಿ ಸುಳಿಯದು ಎಂದು ಎಷ್ಟೇ ಹೇಳಿದರೂ ಯಾವುದೇ ಸಣ್ಣ ಸದ್ದು ಕೇಳಿದರೂ ತೋಳ ಬಂತೆಂಬ ಭ್ರಮೆಯಲ್ಲಿ ತೇಲುತ್ತಿದ್ದ ಮೂರ್ತಿ.
ಅಲ್ಲಿ ಎಲ್ಲವೂ ಪ್ರಕೃತಿ ಮಡಿಲಲ್ಲೇ. ಪೊದೆಗಳ ಮರೆ ನಮ್ಮ ಡ್ರೆಸಿಂಗ್ ರೂಂ. ಪಕ್ಕದಲ್ಲಿ ಹರಿಯುವ ತೊರೆ ಬಾತ್ರೂಂ. ಶೌಚವೆಲ್ಲವೂ ಮರಗಿಡಗಳ ಮರೆಯಲ್ಲೇ. ನಿಜಕ್ಕೂ ಅದೊಂದು ಅಪೂರ್ವ ಅನುಭವ.
ಆಕಸ್ಮಿಕ ಚಿತ್ರದ ಚಿತ್ರೀಕರಣದ ಆ ಜಾಗದಲ್ಲಿ ದಿನವೊಂದು ಕಳೆದು ಬಂದ ನಾವುಗಳು ನಾವೇ ಚಿತ್ರದಲ್ಲಿ ನಟಿಸಿದಂತೆ ಉಬ್ಬಿಹೋಗಿದ್ದೆವು. ಚಿತ್ರದ ಹಾಡು, ತುಣುಕುಗಳು ಟಿವಿಯಲ್ಲಿ ಬಿತ್ತರವಾದರೆ ರೋಮಾಂಚನಗೊಳ್ಳುತ್ತಿದ್ದೆವು. ಇದಾಗಿ, ಒಂದೆರಡು ವರ್ಷಗಳ ಬಳಿಕ ಅದೇ ಜಾಗದಲ್ಲಿ ನಕ್ಸಲರ ಓಡಾಟದ ಕುರಿತ ಸುದ್ದಿಗಳು, ಕೂಂಬಿಂಗ್ ಕುರಿತ ಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗಾದ ನಾವೆಲ್ಲ ಪರಸ್ಪರ ಪೋನಾಯಿಸಿಕೊಂಡು ಅಬ್ಬಾ ಎನ್ನದಿರಲಾಗಲಿಲ್ಲ!
ಚಂದ್ರಾವತಿ ಬಡ್ಡಡ್ಕ
|
|
|
|