ಪ್ರೇಮ್ ನಿರ್ದೇಶನ ಮಾಡಿ ಮೊದಲ ಬಾರಿ ನಾಯಕನಾಗಿ ಭಾರಿ ಪ್ರಚಾರ ಗಿಟ್ಟಿಸಿದ್ದ ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರ ನಿರೀಕ್ಷೆಗೂ ಮೀರಿ ತೋಪಾಯಿತು. ಇದಕ್ಕೆ ಪ್ರೇಮ್ ಅವರ ಅತಿಯಾದ ಆತ್ಮ ವಿಶ್ವಾಸವೇ ಕಾರಣ ಎಂಬುದು ಗಾಂಧಿನಗರದ ಪಂಡಿತರ ಮಾತು.
ಅದೆಲ್ಲ ಹಳೆಯ ವಿಚಾರ ಕೆದಕೋದು ಬೇಡ ಬಿಡಿ. ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರ ಮುಗ್ಗರಿಸಿದ ನಂತರ ಖಡಾ ಖಂಡಿತವಾಗಿ ಇನ್ನು ಮುಂದೆ ನಾಯಕನಾಗಿ ನಟಿಸುವುದಿಲ್ಲ ಎಂದು ಶಪಥ ಮಾಡಿದ್ದರು. ಆದರೆ ಶಪಥ ಮುರಿದು ಪ್ರೇಕ್ಷಕರ ಮೇರೆಗೆ ಮತ್ತೊಂದು ಚಿತ್ರಕ್ಕೆ ನಾಯಕನಾಗುತ್ತಿದ್ದೇನೆ ಅಂತಾರೆ ಪ್ರೇಮ್. ಅಡ್ಡ ಎಂದು ಹೆಸರಿಡಲಾದ ಚಿತ್ರಕ್ಕೆ ಪ್ರೇಮ್ ಮತ್ತೆ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರದ ನಿರ್ಮಾಪಕರು ಕೂಡ ಇವರೇ. ಗುಲಾಮ ಚಿತ್ರ ನಿರ್ದೇಶನ ಮಾಡಿ ಕೈ ಸುಟ್ಟುಕೊಂಡ ತುಷಾರ್ ರಂಗನಾಥ್ ಈ ಚಿತ್ರದ ನಿರ್ದೇಶಕರು.
ಅಡ್ಡ ಚಿತ್ರಕ್ಕೆ ಕತೆಯನ್ನು ಸ್ವತಃ ಪ್ರೇಮ್ ಬರೆದಿದ್ದಾರೆ. ಪ್ರೇಮ್ ಸದ್ಯ ರಾಜ್ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ರಾಜ್ ಚಿತ್ರ ಬಿಡುಗಡೆಯಾಗುತ್ತಿದ್ದಂತೆ ಪ್ರೇಮ್ ಆರಂಭಿಸುತ್ತಿರುವ ಅವರ ಸಂಸ್ಥೆ ಉದ್ಘಾಟನೆ ಮತ್ತು ಅಡ್ಡ ಚಿತ್ರದ ಮುಹೂರ್ತ ಒಟ್ಟಿಗೆ ಮಾಡಲು ಪ್ಲಾನ್ ಮಾಡಿದ್ದಾರಂತೆ. ನಿರ್ದೇಶಕನಾಗಿ ಸೈ ಎನಿಸಿಕೊಂಡಿರುವ ಪ್ರೇಮ್ ಈ ಬಾರಿಯಾದರೂ ನಾಯಕನಾಗಿ ಮಿಂಚಲಿದ್ದಾರಾ ಅನ್ನೋದನ್ನು ಕಾದು ನೋಡಬೇಕು.