ಯುಪಿಎ ಹೆಗ್ಗಳಿಕೆಗಳು ಮತ್ತು ರಾಷ್ಟ್ರಪತಿ ಭಾಷಣದಲ್ಲಿನ ಭರವಸೆಗಳಲ್ಲಿನ ಪೊಳ್ಳುತನವನ್ನು ಎತ್ತಿ ತೋರಿಸಲು ಪ್ರಯತ್ನಿಸಿರುವ ಪ್ರತಿಪಕ್ಷ ಬಿಜೆಪಿ, ನಿಮ್ಮ ಅತ್ಯಂತ ಕಳಪೆ ಪ್ರದರ್ಶನಕ್ಕಿಂತ ನಾವಿನ್ನೂ ಉತ್ತಮ ಸ್ಥಿತಿಯಲ್ಲಿದ್ದೇವೆ ಎಂದು ಕಾಂಗ್ರೆಸಿಗೆ ಚುಚ್ಚಿದೆಯಲ್ಲದೆ, ಸರಕಾರದ ಪ್ರತಿಯೊಂದು ಹೆಜ್ಜೆಯ ಮೇಲೂ ಕಣ್ಗಾವಲು ಇರಿಸುವುದಾಗಿ ತಿಳಿಸಿದೆ.
ಲೋಕಸಭೆಯಲ್ಲಿ ಪ್ರತಿಪಕ್ಷ ಉಪ ನಾಯಕಿಯಾಗಿ ಮಾಡಿದ ಪ್ರಥಮ ಭಾಷಣದಲ್ಲಿ ಆಕ್ರಮಣಕಾರಿ ಮನೋಭಾವ ತೋರಿದ ಬಿಜೆಪಿ ಸದಸ್ಯೆ ಸುಷ್ಮಾ ಸ್ವರಾಜ್, ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಮೇಲಿನ ಚರ್ಚೆಯ ಸಂದರ್ಭ ಕಾಂಗ್ರೆಸ್ ಸಂಸದೆ ಗಿರಿಜಾ ವ್ಯಾಸ್ ಹೇಳಿಕೆಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಹಿಂದಿನ ಆಡಳಿತದ ಉತ್ತಮ ನೀತಿಗಳು ಮತ್ತು ಜಾತ್ಯತೀತತೆಗೆ ಜನಾದೇಶ ದೊರೆತಿದೆ ಮತ್ತು ಚುನಾವಣಾ ಫಲಿತಾಂಶವು ಬಿಜೆಪಿ-ಎನ್ಡಿಎಯ ಅವಸಾನವನ್ನು ಬಿಂಬಿಸುತ್ತದೆ ಎಂದು ಗಿರಿಜಾ ವ್ಯಾಸ್ ಟೀಕಿಸಿದ್ದರು.
ಸಂಪುಟ ದರ್ಜೆ ಸ್ಥಾನ ಮಾನ ಸಿಗಲಿಲ್ಲವೆಂಬ ಕೋಪವನ್ನು ಗಿರಿಜಾ ವ್ಯಾಸ್ ನಮ್ಮ ಮೇಲೇಕೆ ಹರಿಯಬಿಡುತ್ತಿದ್ದಾರೆ? ಎಂದು ಪ್ರಶ್ನಿಸಿದ ಸುಷ್ಮಾ, ಚುನಾವಣೆಗಳಲ್ಲಿ ಸೋಲು-ಗೆಲುವು ಇದ್ದದ್ದೇ. ಹೀಗಾಗಿ ಸೋತರೆ ಅವಸಾನ ಎಂದರ್ಷವಲ್ಲ ಎನ್ನುತ್ತಾ, ಗಿರಿಜಾ ವ್ಯಾಸ್ ಎಷ್ಟು ಬಾರಿ ಸೋತಿದ್ದಾರೆ ಮತ್ತು ಗೆದ್ದಿದ್ದಾರೆ ಎಂಬುದನ್ನೂ ನೆನಪಿಸಿದರು.
ಬಿಜೆಪಿ ಸೋತಿರಬಹುದು. ಆದರೆ ರಣಕ್ಷೇತ್ರದಿಂದ ಅದಿನ್ನೂ ಓಡಿ ಹೋಗಿಲ್ಲ. ಪಕ್ಷವು ತಿರುಗಿಬೀಳಲು ಬದ್ಧವಾಗಿದೆ. ನಾವು ಈಗಲೂ 116 ಸ್ಥಾನ ಹೊಂದಿದ್ದೇವೆ, ಆದರೆ ಕಾಂಗ್ರೆಸ್ 1999ರಲ್ಲಿ 114 ಮಾತ್ರ ಗೆದ್ದುಕೊಂಡಿತ್ತು ಎಂದು ನೆನಪಿಸಿದರು.
ಈ ಫಲಿತಾಂಶವು ಹಿಂದಿನ ಸರಕಾರದ ನೀತಿಗಳಿಗೆ ದೊರೆತ ಜನಾದೇಶ ಎಂಬುದು ಪೊಳ್ಳು ವಾದ ಎಂದು ಪ್ರತಿಪಾದಿಸಿದ ಸುಷ್ಮಾ, ಪ್ರಧಾನ ಮಂತ್ರಿ, ರಕ್ಷಣಾ ಮಂತ್ರಿ, ಮಾನವ ಸಂಪನ್ಮೂಲ ಸಚಿವರು ಹಾಗೂ ಗೃಹ ಸಚಿವರು (ಶಿವರಾಜ್ ಪಾಟೀಲ್) ನಾಲ್ಕುವರೆ ವರ್ಷಗಳ ಕಾಲ ಆಡಳಿತ ಮಾಡಿದರೂ ಅವರು ಸ್ಪರ್ಧಿಸಲೇ ಇಲ್ಲ. ಹಾಲಿ ಗೃಹ ಸಚಿವರು ಮರು ಮತ ಎಣಿಕೆ ನಡೆದ ಬಳಿಕವಷ್ಟೇ ಗೆದ್ದರು. ಸಂಪುಟ ದರ್ಜೆ ಸಚಿವರಾಗಿದ್ದ ಮಣಿ ಶಂಕರ್ ಅಯ್ಯರ್, ಸಂತೋಷ್ ಮೋಹನ್ ದೇವ್, ಅನ್ಬುಮಣಿ ರಾಮದಾಸ್, ಶಂಕರ್ ಸಿಂಗ್ ವಘೇಲಾ ಮತ್ತು ರೇಣುಕಾ ಚೌಧುರಿ ಅವರೆಲ್ಲಾ ಸೋತು ಹೋಗಿದ್ದಾರೆ ಎಂದು ಚುಚ್ಚಿದರು. |