ಸಾಕಷ್ಟು ಚಿತ್ರಗಳು ಚೆನ್ನಾಗಿ ಓಡುತ್ತಿರುವ ಕಾರಣಕ್ಕೋ ಏನೋ, ಎಸ್. ನಾರಾಯಣ್ ನಿರ್ದೇಶನದ ಮಹತ್ವಾಕಾಂಕ್ಷೆಯ ಚಿತ್ರ ಈ ವಾರವೇ ಬಿಡುಗಡೆಯಾಗಬೇಕಿದ್ದ ವೀರ ಪರಂಪರೆ ಬಿಡುಗಡೆ ಒಂದು ವಾರ ಮುಂದೆ ಹೋಗಿದೆ.
ಒಳ್ಳೆ ಚಿತ್ರಗಳು ಯಾವತ್ತು ಬಿಡುಗಡೆ ಆದರೂ ಓಡುತ್ತವೆ ಅನ್ನುವುದಕ್ಕೆ ಕಿಚ್ಚ ಹುಚ್ಚ ಸಾಕ್ಷಿ. ತಡವಾಗಿ ಬಿಡುಗಡೆ ಆದರೂ, ಚಿತ್ರ ಚೆನ್ನಾಗಿ ಓಡುತ್ತಿದೆ. ಇದರಿಂದಲೇ ಇರಬೇಕು ಸುದೀಪ್ ಅವರ ಅಭಿನಯದ ವೀರ ಪರಂಪರೆ ಮುಂದೆ ಹೋಗಿದೆ ಎನ್ನುತ್ತಿದ್ದಾರೆ ಗಾಂಧಿನಗರದ ಜನ.
ಸುದೀಪ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಚಿತ್ರದ ಬಿಡುಗಡೆಯನ್ನು ಕೆಲ ದಿನ ಮುಂದೂಡುವಂತೆ ನಿರ್ಮಾಪಕರು ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಮನವಿ ಮಾಡಿಕೊಂಡಿದ್ದರಿಂದ ನಿರ್ದೇಶಕ ಎಸ್. ನಾರಾಯಣ್ ಈ ನಿರ್ಧಾರ ಕೈಗೊಂಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವಾರ ಚಿತ್ರ ತೆರೆಗೆ ಬರಬೇಕಿತ್ತು. ಆದರೆ ಮನವಿ ಮಾಡಿದ್ದರಿಂದ ಅ.29ಕ್ಕೆ ಬಿಡುಗಡೆ ದಿನಾಂಕ ಮುಂದೆ ಹೋಗಿತ್ತು. ಅಂದು ಚಿತ್ರ ಬಿಡುಗಡೆ ಮಾಡಲು ನಾರಾಯಣ್ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದೀಗ ಎದುರಾದ ಮನವಿಯಿಂದ ಚಿತ್ರ ಯಾವ ಮಂದಿರದಲ್ಲಿ ಬಿಡುಗಡೆ ಆಗಲಿದೆ, ನಿಖರವಾಗಿ ಅಂದೇ ಬಿಡುಗಡೆ ಆಗುತ್ತದಾ? ಅನ್ನುವುದು ತಿಳಿದುಬಂದಿಲ್ಲ.
ವಾರದ ಹಿಂದಷ್ಟೇ ಬಿಡುಗಡೆ ಆಗಿರುವ ಕಿಚ್ಚ ಹುಚ್ಚ ಚೆನ್ನಾಗಿ ಓಡುತ್ತಿದೆ. ಈ ನಡುವೆ ಇನ್ನೊಂದು ಚಿತ್ರ ಬಿಡುಗಡೆ ಆದರೆ ತಮಗೆ ಹೊಡೆತ ಅಂತ ಕಿಚ್ಚ ಹುಚ್ಚ ನಿರ್ಮಾಪಕ ಚಂದ್ರು ಸಹ ಕ್ಯಾತೆ ತೆಗೆದಿದ್ದರು. ಇದೆಲ್ಲವನ್ನು ಪರಿಗಣಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಅನ್ನಲಾಗುತ್ತಿದೆ.