ಕರೀನಾ ಇತ್ತೀಚೆಗೆ ಮಾಧ್ಯಮಗಳ ಜತೆ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡಿದ್ದಾರೆ. ಕರೀನಾಗೆ ಎಷ್ಟು ಸಿಟ್ಟು ಬಂತೆಂದರೆ ನವದೆಹಲಿಯಲ್ಲಿ ಕಂಭಕ್ತ್ ಇಶ್ಕ್ ಚಿತ್ರದ ಪತ್ರಿಕಾಗೋಷ್ಠಿಯಿಂದ ಯಾರಿಗೂ ಹೇಳದೆ ಕೇಳದೆ ಧಡಕ್ಕಂತ ಎದ್ದು ಹೊರನಡೆದರಂತೆ.
ಕರೀನಾಗೆ ಇಷ್ಟು ಸಿಟ್ಟು ಬರಲು ಕಾರಣವಾದರೂ ಏನಂತೀರಾ? ಕಾರಣ ಇಷ್ಟೆ. ಕರೀನಾಳ ಬಳಿ ಒಬ್ಬ ಪತ್ರಕರ್ತೆ ಚಿತ್ರದ ಕಥೆಯೊಂದಕ್ಕೆ ಬೆತ್ತಲೆಯಾಗುವ ದೃಶ್ಯ ಅನಿವಾರ್ಯವಾಗಿದ್ದರೆ ನೀವು ನಟಿಸುತ್ತೀರಾ ಎಂದು ಪ್ರಶ್ನೆ ಕೇಳಿದ್ದು.
ನೀವೂ ಬೆತ್ತಲೆಯಾಗುತ್ತೀರಾ? ಎಂದು ಕೇಳಿದ ತಕ್ಷಣ ಕರೀನಾ ಎಲ್ಲಿಲ್ಲದ ಸಿಟ್ಟು ನೆತ್ತಿಗೇರಿತು. ಅಷ್ಟರವರೆಗೆ ಕರೀನಾಗೆ ತನ್ನ ಖಾಸಗಿ ವಿಚಾರಗಳ ಕುರಿತ ಪ್ರಶ್ನೆಗಳಿಗೂ ಇಷ್ಟು ಸಿಟ್ಟು ಬಂದಿರಲಿಲ್ಲವಂತೆ. ಪತ್ರಕರ್ತರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಸಮಾಧಾನಚಿತ್ತರಾಗಿ ಉತ್ತರಿಸುತ್ತಲೇ ಇದ್ದ ಕರೀನಾ ಈ ಪ್ರಶ್ನೆ ಬಂದ ತಕ್ಷಣ ಮೂಗಿನ ತುದಿಯಿಂದ ಬಂದ ಸಿಟ್ಟಿನಿಂದ ಪತ್ರಿಕಾಗೋಷ್ಠಿಯಿಂದಲೇ ಎದ್ದು ಹೊರಹೋಗಿಬಿಟ್ಟರಂತೆ.
ಕರೀನಾ ಈ ಪ್ರಶ್ನೆ ಕೇಳುವ ಮೊದಲು, ತನ್ನ ಹಳೆಯ ತಶನ್ ಚಿತ್ರವೂ ಸೇರಿದಂತೆ ಕಂಭಕ್ತ್ ಇಶ್ಕ್ ಚಿತ್ರದ ಪಾತ್ರಗಳಲ್ಲಿ ಬಿಕಿನಿ ಧರಿಸುವ ಅನಿವಾರ್ಯವಿತ್ತು. ಪಾತ್ರಕ್ಕೆ ಅಗತ್ಯವಿತ್ತೆಂದು ಅನಿಸಿದ್ದರಿಂದ ಮಾಡಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದರು. ಜತೆಗೆ, ಪಾತ್ರಕ್ಕೆ ಅಗತ್ಯವೆನಿಸಿದರೆ, ನಾನು ಹಾಗೆ ಕಾಣಿಸಿಕೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದೂ ಕರೀನಾ ಹೇಳಿದ್ದರು.
IFM
ಕರೀನಾರಿಂದ ಈ ಮಾತು ಬಂದಿದ್ದಕ್ಕೆ ಒಬ್ಬ ಪತ್ರಕರ್ತೆ, ಹಾಗಾದರೆ ಪಾತ್ರಕ್ಕೆ ಅಗತ್ಯವಿದ್ದರೆ ಬಿಕಿನಿಯಲ್ಲಿ ಕಾಣುತ್ತೀರಾದರೆ, ಇನ್ನೊಂದು ಚಿತ್ರದಲ್ಲಿ ಪಾತ್ರಕ್ಕೆ ಬೆತ್ತಲೆಯಾಗಿ ನಟಿಸುವುದು ಅಗತ್ಯವೆಂದು ಕಂಡರೆ ನೀವು ಕ್ಯಾಮರಾ ಮುಂದೆ ಬೆತ್ತಲೆಯಾಗಿ ನಿಲ್ಲಲೂ ಸಿದ್ಧರಿದ್ದೀರಾ? ಎಂದು ಕೇಳಿಯೇ ಬಿಟ್ಟರು. ಆದರೆ ಕರೀನಾಗೆ ಸಿಟ್ಟು ಬರಲು ಇಷ್ಟು ಸಾಕಿತ್ತು ಎನ್ನುತ್ತಾರೆ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಪತ್ರಕ್ಷದರ್ಶಿಗಳೊಬ್ಬರು.
ಕರೀನಾಗೆ ಈ ಪತ್ರಿಕಾಗೋಷ್ಠಿಗೆ ಹಾಜರಾಗುವಾಗಲೇ ಅಷ್ಟೊಂದು ಸಮಾಧಾನಚಿತ್ತವಿರಲಿಲ್ಲವಂತೆ. ಅದಕ್ಕೆ ಕಾರಣವೂ ಇದೆ. ಸೆಲೆಬ್ರಿಟಿಗಳನ್ನೂ ಕರೆಸಿ ನಡೆಸಿದ್ದರಿಂದ ನವದೆಹಲಿಯ ಆ ಪತ್ರಿಕಾಗೋಷ್ಠಿಗೆ 100ಕ್ಕೂ ಹೆಚ್ಚು ಪತ್ರಕರ್ತರು ಆಗಮಿಸಿದ್ದರು. ಆದರೆ ಪತ್ರಿಕಾಗೋಷ್ಠಿ ನಡೆಸಿದ್ದ ಹಾಲ್ ತುಂಬ ಚಿಕ್ಕದಿತ್ತು. ಎಲ್ಲ ಪತ್ರಕರ್ತರೂ ಸಾವಕಾಶವಾಗಿ ಕುಳಿತುಕೊಳ್ಳಲು ಸ್ಥಳಾವಕಾಶವಿರಲಿಲ್ಲ. ಹೀಗಾಗಿ ಕರೀನಾಗೆ ಆರಂಭದಲ್ಲೇ ಅಸಮಾಧಾನವಿತ್ತು.
ಕರೀನಾ ಹೊರನಡೆದ ಮೇಲೆ ಕಂಭಕ್ತ್ ಇಶ್ಕ್ ಚಿತ್ರದ ನಿರ್ದೇಶಕ ಸಬೀರ್ ಖಾನ್ ಮಾತ್ರ ಚೆನ್ನಾಗೇ ಗೋಷ್ಠಿಯನ್ನು ಮುಗಿಸಿದರು. ಕರೀನಾಳ ನಡತೆಗೆ ತೆಗಳಲಿಲ್ಲ. ಜತೆಗೆ ಕರೀನಾಳ ಈ ನಡತೆಯಿಂದ ಚಿತ್ರಕ್ಕೆ ನಷ್ಟವಾಗುತ್ತದೆ ಎಂದೂ ಹೇಳಲಿಲ್ಲ. ಚಿತ್ರ ಖಂಡಿತವಾಗಿಯೂ ಯಶಸ್ವಿಯಾಗುತ್ತದೆ ಎಂದು ಸಬೀರ್ ಮಾತು ಮುಗಿಸಿದರು.