ತಮಿಳು ವ್ಯಾಘ್ರಗಳ ನಾಯಕ ವೇಲುಪಿಳ್ಳೈ ಪ್ರಭಾಕರನ್ನನ್ನು ಕೊಲ್ಲುವುದಕ್ಕೆ ಮುಂಚಿತವಾಗಿ ಶ್ರೀಲಂಕಾ ಮಿಲಿಟರಿ ಚಿತ್ರಹಿಂಸೆ ನೀಡಿದೆಯೆಂದು ಮಾನವ ಹಕ್ಕು ರಕ್ಷಣೆಯ ಪ್ರಮುಖ ಸಂಘಟನೆಯೊಂದು ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. ತಮಿಳು ಸರ್ಕಾರದ ರಾಜಕಾರಣಿ ಮತ್ತು ಜನರಲ್ವೊಬ್ಬರ ಸಮ್ಮುಖದಲ್ಲೇ ಪ್ರಭಾಕರನ್ಗೆ ಚಿತ್ರಹಿಂಸೆ ನೀಡಲಾಯಿತೆಂದು ಉನ್ನತ ಮಟ್ಟದ ಮಿಲಿಟರಿ ಮೂಲಗಳನ್ನು ಉಲ್ಲೇಖಿಸಿ ವಿವಿ ಉಪನ್ಯಾಸಕರ ಮಾನವ ಹಕ್ಕು ಸಂಘಟನೆ ತಿಳಿಸಿದೆ.
ಎಲ್ಟಿಟಿಇ ಜತೆ ಹೋರಾಡಿದ ಸೇನೆಯ 53ನೇ ವಿಭಾಗದ ಮುಖ್ಯಕೇಂದ್ರದಲ್ಲಿ ಬಹುಶಃ ಚಿತ್ರಹಿಂಸೆ ನೀಡಿರಬಹುದೆಂದು ಹೇಳಲಾಗಿದೆ.ಪ್ರಭಾಕರನ್ನ 12 ವರ್ಷ ವಯಸ್ಸಿನ ಕಿರಿಯ ಪುತ್ರ ಬಾಲಚಂದ್ರನ್ನನ್ನು ಸೆರೆಹಿಡಿದ ಬಳಿಕ ಕೊಲ್ಲಲಾಗಿದೆಯೆಂದು ಹಲವಾರು ಸೇನೆಯ ಮೂಲಗಳು ತಿಳಿಸಿವೆ. ಅವನನ್ನು ತಂದೆಯ ಸಮ್ಮುಖದಲ್ಲೇ ಹತ್ಯೆಮಾಡಲಾಯಿತೆಂದು ಮೂಲಗಳು ಹೇಳಿದ್ದಾಗಿ ಮಾನವ ಹಕ್ಕು ರಕ್ಷಣೆ ಸಂಘಟನೆ ತಿಳಿಸಿದೆ.
ಮಿಲಿಟರಿ ಮತ್ತು ಎಲ್ಟಿಟಿಇಯ ಅತಿರೇಕಗಳ ಬಗ್ಗೆ ಸಂಘಟನೆ ತೀವ್ರ ಟೀಕಾಪ್ರಹಾರ ಮಾಡಿದೆ. ಗುಂಡು ಹಾರಾಟ ನಿಷೇಧ ಪ್ರದೇಶದಲ್ಲಿದ್ದ ಎಲ್ಲ ಎಲ್ಟಿಟಿಇ ಉಗ್ರರನ್ನು ಕಗ್ಗೊಲೆ ಮಾಡಲಾಗಿದೆಯೆಂದು 48 ಪುಟಗಳ ವರದಿಯಲ್ಲಿ ತಿಳಿಸಿದ್ದು, ಇದರ ಪ್ರತಿಯನ್ನು ಐಎಎನ್ಎಸ್ಗೆ ಕಳಿಸಲಾಗಿದೆ. |