ಕಳೆದ ತಿಂಗಳು ಆಸ್ಟ್ರೇಲಿಯದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಹಿಂಸಾತ್ಮಕ ದಾಳಿಗಳು ತೀವ್ರಗೊಂಡಿದ್ದರಿಂದ ಕನಿಷ್ಠ 46 ಭಾರತೀಯ ವಿದ್ಯಾರ್ಥಿಗಳು ಆಸ್ಟ್ರೇಲಿಯ ತ್ಯಜಿಸಿದ್ದಾರೆ. ಇನ್ನೂ ಅನೇಕ ಮಂದಿಯನ್ನು ಮನೆಗೆ ಹಿಂತಿರುಗುವಂತೆ ಕಳವಳಕ್ಕೀಡಾದ ಅವರ ಪೋಷಕರು ತಿಳಿಸಿದ್ದಾರೆಂದು ಮೆಲ್ಬೋರ್ನ್ ಮೂಲದ ನಿಯತಕಾಲಿಕೆ ತಿಳಿಸಿದೆ. 'ಅನೇಕ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ವಾಪಸು ಬರುವಂತೆ ಅವರ ಪೋಷಕರು ಒತ್ತಡ ಹೇರಿದ್ದಾರೆ.
ಎರಡು ವಿಶ್ವವಿದ್ಯಾಲಯಗಳು ಭಾರತೀಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡದಿರಲು ನಿರ್ಧರಿಸಿವೆ ಮತ್ತು ಈಗ ವಿವಿಗಳಿಗೆ ಪ್ರವೇಶ ಪಡೆದ ಅನೇಕ ವಿದ್ಯಾರ್ಥಿಗಳು ಪ್ರವೇಶ ರದ್ದುಮಾಡುತ್ತಿರುವುದರಿಂದ ಶೈಕ್ಷಣಿಕ ಸಲಹೆಗಾರರಿಗೆ ತಲೆನೋವಾಗಿದೆ' ಭಾರತೀಯ ವಿದ್ಯಾರ್ಥಿ ನಿಯತಕಾಲಿಕದ ಸಂಪಾದಕ ತಿರುವಲ್ಲಂ ಭಾಸಿ ಮೆಲ್ಬೋರ್ನ್ನಿಂದ ದೂರವಾಣಿಯಲ್ಲಿ ತಿಳಿಸಿದ್ದಾರೆ.
"ದಾಳಿಗೆ ಗುರಿಯಾದ ಕೇರಳದ ಇಬ್ಬರು ವಿದ್ಯಾರ್ಥಿಗಳಾದ ಮೋನಿಷ್ ನಾಯರ್ ಮತ್ತು ಗೌತಂ ಮಂಗಳವಾರ ಬೆಳಿಗ್ಗೆ ತಮ್ಮ ಮನೆಗೆ ಬಂದು ತಾವು ಆಸ್ಟ್ರೇಲಿಯ ತ್ಯಜಿಸುತ್ತಿರುವುದಾಗಿ ಹೇಳಿದರು. ಮೆಲ್ಬೋರ್ನ್ ಡೀಕಿನ್ ವಿವಿಯಲ್ಲಿ ಅವರಿಬ್ಬರು ಎರಡನೇ ವರ್ಷದ ಎಂಬಿಎ ತರಗತಿಯಲ್ಲಿದ್ದರು' ಎಂದು ಭಾಸಿ ತಿಳಿಸಿದ್ದಾರೆ.ಮೇ 23ರಂದು ಮೆಲ್ಬೋರ್ನ್ ಗಿಲ್ಲಾರ್ಡ್ ಬೀದಿಗೆಯಲ್ಲಿರುವ ತಮ್ಮ ನಿವಾಸಕ್ಕೆ ವಾಪಸಾಗುವಾಗ ಆಸ್ಟ್ರೇಲಿಯ ತಂಡದಿಂದ ದಾಳಿಗೆ ಗುರಿಯಾಗಿದ್ದಾಗಿ ನಾಯರ್ ಹೇಳಿದ್ದಾರೆ.
ಈ ದಾಳಿಯನ್ನು ಅನಿರೀಕ್ಷಿತವಾಗಿ ನಡೆಸಲಾಗಿದೆ. ನಮ್ಮನ್ನು ಒದೆಯಲಾಯಿತು ಮತ್ತು ಮುಷ್ಠಿಪ್ರಹಾರ ಮಾಡಲಾಯಿತು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೂ ಪೊಲೀಸರ ವರ್ತನೆಯಿಂದ ನಮಗೆ ಇನ್ನಷ್ಟು ಬೇಸರವಾಗಿದೆ. ನಾವು ವಿದ್ಯಾರ್ಥಿಗಳಾಗಿದ್ದು ಸಮಸ್ಯೆಗಳು ಉದ್ಭವಿಸುವುದರಿಂದ ಈ ಪ್ರಕರಣ ಕೈಬಿಡುವುದು ಒಳ್ಳೆಯದೆಂದು ಅವರು ಸಲಹೆ ಮಾಡಿದ್ದಾರೆಂದು ನಾಯರ್ ಹೇಳಿದ್ದಾರೆ.
ಆಸ್ಟ್ರೇಲಿಯದಲ್ಲಿ ಎರಡು ವರ್ಷಗಳ ಎಂಬಿಎ ವಿದ್ಯಾಭ್ಯಾಸಕ್ಕೆ ಸುಮಾರು 60,000 ಡಾಲರ್ ಅಥವಾ 25 ಲಕ್ಷ ರೂ. ಖರ್ಚು ಬೀಳುತ್ತದೆ. ನಾವು ಅಪಾರ ಹಣ ಕಳೆದುಕೊಂಡಿದ್ದು, ಅಕ್ಷರಶಃ ಇಡೀ ಶುಲ್ಕ ಪಾವತಿ ಮಾಡಿದ್ದು ಇನ್ನೊಂದು ಪೂರ್ಣ ಸೆಮಿಸ್ಟರ್ ಬಾಕಿವುಳಿದಿತ್ತು. ಆದರೆ ನಮ್ಮ ಪೋಷಕರು ಆತಂಕಿತರಾಗಿದ್ದು, ನಮ್ಮ ಬರುವಿಕೆಯನ್ನು ನಿರೀಕ್ಷಿಸಿದ್ದಾರೆಂದು ನಾಯರ್ ತಿಳಿಸಿದರು. |