ಮಾಯವತಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಗಂಗಾ ಗಂಗಾಎಕ್ಸ್ಪ್ರೆಸ್ ವೇ ಯೋಜನೆಯನ್ನು ಮುಂದಿನ ಆದೇಶದ ತನಕ ಮುಂದುವರಿಸದಂತೆ ಅಲಹಾಬಾದ್ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಉತ್ತರ ಪ್ರದೇಶ ಸರ್ಕಾರಕ್ಕೆ ಇನ್ನೊಂದು ಹಿನ್ನಡೆ ಉಂಟಾಗಿದೆ. ಈ ಯೋಜನೆಯು ರಾಜ್ಯದ ಪೂರ್ವ ಮತ್ತು ಪಶ್ಚಿಮ ಭಾಗಗಳನ್ನು ಸಂಪರ್ಕಿಸುವ ಉದ್ದೇಶ ಹೊಂದಿತ್ತು.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಹಾಗೂ ಅರುಣ್ ಟಂಡನ್ ಅವರನ್ನೊಳಗೊಂಡ ನ್ಯಾಯಪೀಠವು ವಾರಣಾಸಿ ಮೂಲದ ಸಾಮಾಜಿಕ ಸಂಘಟನೆಯಾಗಿರುವ 'ಗಂಗಾ ಮಹಾಸಭಾವು' ಸಲ್ಲಿಸಿರುವ ದೂರಿನಾಧಾರದಲ್ಲಿ ಈ ತಡೆಯಾಜ್ಞೆ ನೀಡಿದೆ. ಸಾವಿರ ಕಿಲೋಮೀಟರ್ ಉದ್ದದ ಈ ಯೋಜನೆಯು ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಹಲವಾರು ಪರಿಸರ ಸಮಸ್ಯೆಗಳನ್ನುಂಟುಮಾಡಲಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ರಾಜ್ಯಮಟ್ಟದ ಪರಿಸರ ಪರಿಣಾಮ ಅಂದಾಜು ಪ್ರಾಧಿಕಾರ(ಎಸ್ಇಐಎಎ) ದಿಂದ ಕಾನೂನು ಪ್ರಕಾರವಾಗಿ ಅನುಮತಿ ಪತ್ರವನ್ನು ಪಡೆಯುವ ತನಕ ಅಷ್ಟಪಥದ ಈ ಹೆದ್ದಾರಿ ಯೋಜನೆಯನ್ನು ರಾಜ್ಯ ಸರ್ಕಾರ ಮುಂದುವರಿಸಬಾರದು ಎಂಬುದಾಗಿ ತನ್ನ ತೀರ್ಪಿನಲ್ಲಿ ನ್ಯಾಯಪೀಠ ಹೇಳಿದೆ.
ಇದೇ ವೇಳೆ ರಾಜ್ಯ ಸರ್ಕಾರವು 23.08.2007ರಲ್ಲಿ ಎಸ್ಇಐಎಎಯಿಂದ ಪಡೆದಿರುವ ಅನುಮತಿ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಇದನ್ನು ಕಾನೂನು ರೀತ್ಯ ಪಡೆಯಲಾಗಿಲ್ಲ ಎಂಬ ಕಾರಣ ನೀಡಿ ನ್ಯಾಯಪೀಠ ವಜಾಗೊಳಿಸಿದೆ.
ಇದು ಉತ್ತರ ಪ್ರದೇಶ ಸರ್ಕಾರಕ್ಕೆ ಇನ್ನೊಂದು ಹಿನ್ನೆಡೆ. ಈ ವಾರದ ಆದಿಯಲ್ಲಿ ಪೊಲೀಸ್ ನೇಮಕಾತಿ ವಿವಾದ ಸಂಬಂಧಿಸಿದಂತೆ ಹೈಕೋರ್ಟಿನಲ್ಲಿ ಬಾಕಿಯುಳಿದಿರುವ ನ್ಯಾಯಾಲಯ ನಿಂದನೆ ಪ್ರಕರಣಕ್ಕೆ ತಡೆಯಾಜ್ಞೆ ನೀಡಬೇಕು ಎಂಬ ಮಾಯಾ ಸರ್ಕಾರದ ಮನವಿಯನ್ನು ಸುಪ್ರೀಂಕೋರ್ಟ್ ತೀವ್ರವಾಗಿ ಖಂಡಿಸಿತ್ತು. |