ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಿದ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಜ್ಯೋತಿಷಿಯೊಬ್ಬರು ಸಲ್ಲಿಸಿದ ಅರ್ಜಿಯನ್ನು ಗುರುವಾರ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್ ಈ ಕುರಿತು ಸರ್ಕಾರ ಹಾಗೂ ಎನ್ಜಿಓ ನಾಜ್ ಫೌಂಡೇಶನ್ಗೆ ನೋಟೀಸು ನೀಡಿದೆ. ಜುಲೈ 20ರೊಳಗಾಗಿ ಉತ್ತರಿಸುವಂತೆ ನ್ಯಾಯಾಲಯ ಹೇಳಿದೆ.
ವಿವಾಹ ಕಾನೂನುಗಳು ಬದಲಾಗಿಲ್ಲ ಎಂದು ಸ್ಪಷ್ಟಪಡಿಸಿದ ಸರ್ವೋಚ್ಛ ನ್ಯಾಯಾಲಯವು ಸಲಿಂಗ ವ್ಯಕ್ತಿಗಳ ವಿವಾಹಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಸಲಿಂಗಿಗಳ ವಿವಾಹ ಅಥವಾ ನೋಂದಣಿಗೆ ತಡೆಯಾಜ್ಞೆ ನೀಡುವ ವಿಚಾರವನ್ನು ಕೇಂದ್ರ ಹಾಗೂ ಸಂಬಂಧಿಸಿದ ಪಕ್ಷಗಳ ಉತ್ತರವನ್ನು ಪಡೆದ ಬಳಿಕ ಪರಿಗಣಿಸಬಹುದಾಗಿದೆ.
ಪರಸ್ಪರ ಸಮ್ಮತಿಯ ಮೇಲೆ ಸಲಿಂಗ ಕಾಮವನ್ನು ಕಾನೂನುಬದ್ಧಗೊಳಿಸುವ ಹೈಕೋರ್ಟ್ನ ಜುಲೈ 2ರ ತೀರ್ಪನ್ನು ರದ್ದುಮಾಡುವಂತೆ ಸುರೇಶ್ ಕುಮಾರ್ ಕೌಶಲ್ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.
ಇದಕ್ಕೆ ಮುಂಚೆ ಸಲಿಂಗಕಾಮ ಕ್ರಿಮಿನಲ್ ಅಪರಾಧವಾಗಿದ್ದು, ಜೀವಾವಧಿ ಶಿಕ್ಷೆ ನೀಡಬಹುದಾಗಿದೆ.ಸಲಿಂಗಕಾಮದ ಕೃತ್ಯಗಳು ಎಲ್ಲ ರೀತಿಯಲ್ಲೂ ಅನೈಸರ್ಗಿಕ ಕ್ರಿಯೆಯಾಗಿದ್ದು, ಅದಕ್ಕೆ ಅವಕಾಶ ನೀಡಬಾರದು ಎಂದು ಕೌಶಲ್ ಅರ್ಜಿಯಲ್ಲಿ ತಿಳಿಸಿದ್ದಾರೆ. ಅನೈಸರ್ಗಿಕ ಕೃತ್ಯಗಳ ಪರಿಣಾಮಗಳನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಪ್ರಾಣಿಗಳೂ ಸಹ ಇಂತಹ ಅಸಹಜ ಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಕೌಶಲ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಹೈಕೋರ್ಟ್ ತೀರ್ಪಿನ ಫಲವಾಗಿ ಎಚ್ಐವಿ ವೈರಸ್ ಹರಡಲಿದ್ದು, ಅನೈಸರ್ಗಿಕ ಲೈಂಗಿಕತೆ ಫಲವಾಗಿ ಎಚ್ಐವಿ ವೈರಸ್ ಹರಡುವುದು ಸಾಬೀತಾಗಿದೆಯೆಂದು ಅವರು ತಿಳಿಸಿದ್ದಾರೆ. ಮಾರ್ಗದರ್ಶನ ಪಡೆಯಲು ನಾವು ನಮ್ಮ ಗ್ರಂಥಗಳನ್ನು ಪರಿಶೀಲಿಸಿದರೆ ನಮ್ಮ ಸಮಾಜದಲ್ಲಿ ಇಂತಹ ನಡುವಳಿಕೆಗೆ ವಿರೋಧವಿದೆಯೆನ್ನುವುದು ತಿಳಿಯುತ್ತದೆಂದು ಅವರು ಹೇಳಿದ್ದಾರೆ.
ಇಂತಹ ಅಸ್ವಸ್ಥತೆಗೆ ಅನುಮತಿ ನೀಡಿದರೆ, ಪ್ರಾಣಿಗಳ ಜತೆ ಲೈಂಗಿಕತೆಗೆ ನಾಳೆ ಜನರು ಅನುಮತಿ ಕೇಳಬಹುದೆಂದು ಅವರು ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ದೆಹಲಿ ಹೈಕೋರ್ಟ್ ಸಲಿಂಗಕಾಮ ಸಕ್ರಮಗೊಳಿಸುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಧಾರ್ಮಿಕ ನಾಯಕರು ಈ ತೀರ್ಪಿನ ವಿರುದ್ಧ ಸಿಡಿದೆದ್ದಿದ್ದಾರೆ.
ಸಲಿಂಗ ಕಾಮ ಅಸ್ವಸ್ಥ ಮನಸ್ಸಿನ ಅಸಹಜ ಕ್ರಿಯೆಯೆಂದು ಅವರು ಟೀಕಿಸಿದ್ದು, ಅದನ್ನು ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಸಲಿಂಗ ಕಾಮದ ಬಗ್ಗೆ ಪರ, ವಿರೋಧದ ಪ್ರತಿಕ್ರಿಯೆಗಳು ಹರಿದುಬರುತ್ತಿರುವ ನಡುವೆ ಇದು ಸಕ್ರಮವೇ ಅಥವಾ ಅಕ್ರಮವೇ ಎನ್ನುವ ಗೊಂದಲದಲ್ಲಿ ರಾಜಕೀಯ ನಾಯಕರು ಮುಳುಗಿದ್ದಾರೆ. |