ಸಾಹಿತಿ ಎಸ್.ಎಲ್.ಬೈರಪ್ಪ ಅವರು ಬರೆದ ಕೆಲವು ಲೇಖನಗಳು ಹಿಂದೂ ಮತ್ತು ಕ್ರಿಶ್ಚಿಯನ್ನರ ಶಾಂತಿಯುತ ಸಹಬಾಳ್ವೆಗೆ ಬಾಧಕವಾಯಿತು ಎಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ ಸಂಭವಿಸಿದ ಚರ್ಚ್ಗಳ ಮೇಲಿನ ದಾಳಿಯ ವಿಚಾರಣೆಗೆ ನೇಮಿಸಲಾಗಿದ್ದ ಬಿ.ಕೆ.ಸೋಮಶೇಖರ ಆಯೋಗಕ್ಕೆ ಗುರುವಾರ ತಿಳಿಸಲಾಯಿತು.
ಆಯೋಗದ ಕಾನೂನು ಸಲಹೆಗಾರ ಎಸ್.ಆರ್.ರವಿಪ್ರಕಾಶ್ ಅವರು ಆಯೋಗಕ್ಕೆ ಅಫಿದವಿತ್ ಸಲ್ಲಿಸಿದ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದರು. ಪೆರ್ಮನ್ನೂರಿನ ನಿವೃತ್ತ ಶಿಕ್ಷಕಿ ಸಿಸ್ಟರ್ ಜೋಸೆಫ್ ಮೇರಿ ತಮ್ಮ ಹೇಳಿಕೆ ದಾಖಲಿಸುತ್ತಾ, ಬೈರಪ್ಪ ಅವರು ಕ್ರಿಶ್ಚಿಯನ್ನರ ಬಗ್ಗೆ ತಪ್ಪು ಭಾವನೆ ಮೂಡುವಂತಹ ಲೇಖನಗಳನ್ನು ಬರೆದರು ಎಂದು ಹೇಳಿದರು. ನೊಬೆಲ್ ಪ್ರಶಸ್ತಿ ವಿಜೇತೆ ಮದರ್ ತೆರೇಸಾ ಮತ್ತು ಅವರ ಸಂಸ್ಥೆಯ ಚಟುವಟಿಕೆಗಳು ಮತಾಂತರದ ಉದ್ದೇಶ ಹೊಂದಿದ್ದವು ಎಂಬಂತೆ ಭೈರಪ್ಪ ಬಿಂಬಿಸಿದ್ದರು. ತತ್ಪರಿಣಾಮವಾಗಿ, ಹಿಂದೂಗಳು ಕ್ರಿಶ್ಚಿಯನ್ನರ ಬಗ್ಗೆ ಸಂದೇಹದಿಂದಲೇ ನೋಡುವಂತಾಯಿತು. ಭವಿಷ್ಯದಲ್ಲಿ ಇಂತಹ ಲೇಖನಗಳು ಪ್ರಕಟವಾಗದಂತೆ ಕ್ರಮ ಕೈಗೊಳ್ಳುವಂತೆ ಆಕೆ ಒತ್ತಾಯಿಸಿದರು.
ಆಯೋಗದ ಮುಂದೆ ಹಾಜರಾದ ಉಳ್ಳಾಲ ನಗರಸಭೆ ಮಾಜಿ ಅಧ್ಯಕ್ಷೆ ರುಫೀನಾ ವೇಗಸ್, ಪೊಲೀಸರು ಮತ್ತು ಬಜರಂಗ ದಳ ಕಾರ್ಯಕರ್ತರು ಪೆರ್ಮನ್ನೂರು ಚರ್ಚಿಗೆ ಕಲ್ಲುಗಳನ್ನು ಹಿಡಿದು ಬಂದಿದ್ದರು. ಚರ್ಚ್ನತ್ತ ಕಲ್ಲೆಸೆಯುತ್ತಾ ಅವರು ಒಳಗೆ ಬರುತ್ತಿರುವುದನ್ನು ನೋಡಿದ್ದಾಗಿ ಹೇಳಿದಗ ಆಕೆ, ಪೊಲೀಸರೇ ಚರ್ಚಿನ ಕಿಟಕಿಗಳನ್ನು ಮುರಿದದ್ದನ್ನು ನೋಡಿದ್ದಾಗಿಯೂ ಹೇಳಿದರು.
ಸ್ಥಳದಲ್ಲಿ ಹಾಜರಿದ್ದ ಅಂದಿನ ಎಸ್ಪಿ ಎನ್.ಸತೀಶ್ ಕುಮಾರ್ ಅವರನ್ನು ಈ ಬಗ್ಗೆ ತಾನು ಪ್ರಶ್ನಿಸಿದೆ. ಆದರೆ ಅವರು 'ನೀವು ಈಗಾಗಲೇ ಮತಾಂತರದ ಮೂಲಕ ಸಾಕಷ್ಟು ತೊಂದರೆ ನೀಡಿದ್ದೀರಿ. ಕೂಡಲೇ ಹೊರಡಿ, ಇಲ್ಲವಾದಲ್ಲಿ ನಾವು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ' ಎಂದು ಹೇಳಿದ್ದಾಗಿ ವೇಗಸ್ ಆರೋಪಿಸಿದರು.
ಪೊಲೀಸರು ಈ ಪವಿತ್ರ ಸ್ಥಳದಲ್ಲಿ ಶೂಗಳನ್ನು ಹಾಕಿಯೇ ಹೋಗುತ್ತಿದ್ದುದನ್ನು ಕಂಡೆ. ದುಷ್ಕರ್ಮಿಗಳು ಹಲವು ಪ್ರತಿಮೆಗಳನ್ನು ಭಗ್ನ ಮಾಡಿದರು. ಪೊಲೀಸರು ಕ್ರಿಶ್ಚಿಯನ್ನರನ್ನೇ ಬಂಧಿಸಿದರು. ಬಜರಂಗ ದಗಳದವರಿಗೆ ಏನೂ ಮಾಡಿಲ್ಲ ಎಂದೂ ಆಕೆ ಆರೋಪಿಸಿದರಲ್ಲದೆ, ಚರ್ಚುಗಳ ಮೇಲಿನ ದಾಳಿ ಪೂರ್ವಯೋಜಿತವಾಗಿತ್ತು ಎಂದೂ ಹೇಳಿದರು. |