ನಗರದ ಆಟೋ, ಟ್ಯಾಕ್ಸಿ ಚಾಲಕರ ಹಾಗೂ ಮಾಲೀಕರ ಘಟಕವು ಆಟೋ ರಿಕ್ಷಾಗಳ ಬಣ್ಣವನ್ನು ಬದಲಿಸುವ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದೆ.
ಬೆಂಗಳೂರು ನಗರ ಒಂದರಲ್ಲೇ ಸುಮಾರು 80 ಸಾವಿರ ಆಟೋಗಳು ಸಂಚರಿಸುತ್ತಿದ್ದು, ಅವುಗಳ ಬಣ್ಣ ಬದಲಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮ ಖಂಡನೀಯ ಎಂದು ಘಟಕ ಆರೋಪಿಸಿದೆ.
ಆಟೋ ಚಾಲಕರ ಕುಟುಂಬಕ್ಕೆ ಯಾವ ಸವಲತ್ತನ್ನೂ ಕೊಡದ ಸರ್ಕಾರ, ಆಟೋರಿಕ್ಷಾಗಳ ಟಾಪ್ ಬಣ್ಣವನ್ನು ಬದಲಿಸಬೇಕು ಎಂಬಿತ್ಯಾದಿ ಕಾನೂನನ್ನು ತರುವ ಬದಲು, ಚಾಲಕರ ಕುಟುಂಬಕ್ಕೆ ಏನು ಮಾಡಿದೆ ಎನ್ನುವುದು ಮುಖ್ಯ. ಬಡ ಆಟೋ ಚಾಲಕರಿಗೆ ಸರ್ಕಾರ ಸವಲತ್ತನ್ನು ನೀಡದೆ, ಹಿಂಸೆಯನ್ನು ಕೊಟ್ಟರೆ ಸರ್ಕಾರದ ವಿರುದ್ಧ ಚಾಲಕ ವರ್ಗ ಸಟೆದು ನಿಲ್ಲಬೇಕಾಗುತ್ತದೆ ಎಂದು ಘಟಕ ಎಚ್ಚರಿಕೆ ನೀಡಿದೆ.
ಸರ್ಕಾರ ರಚನೆಯಾಗಿ ವರ್ಷಕ್ಕೂ ಹೆಚ್ಚು ಕಾಲವಾಗಿದ್ದರೂ ಸಾರಿಗೆ ಸಚಿವರು ಚಾಲಕರ ಸಂಘದ ಸಭೆಯನ್ನು ಕರೆಯದೆ, ಅವರ ಕಷ್ಟಗಳಿಗೆ ಸ್ಪಂದಿಸಿಲ್ಲ. ಅಲ್ಲದೆ, ಚಾಲಕರ ಬೇಡಿಕೆಗಳಾದ ವಸತಿ ಸೌಲಭ್ಯ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದೆ.