ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉಗ್ರ ಹೆಡ್ಲಿ ಬಾಯ್ಬಿಟ್ಟ ವಿವರ ಕೊಡಿ: ಭಾರತಕ್ಕೆ ಪಾಕ್ (Lashkar-e-Toiba | Mumbai terror attack | David Coleman Headley | Pakistan)
ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ವಶದಲ್ಲಿರುವ ಡೇವಿಡ್ ಹೆಡ್ಲಿಯನ್ನು ಭಾರತದ ಎನ್ಐಎ ಮತ್ತು ಅಮೆರಿಕದ ಅಧಿಕಾರಿಗಳು ತನಿಖೆ ನಡೆಸಿದ್ದು, ಅದರ ಪೂರ್ಣ ವಿವರಗಳನ್ನು ಉಭಯ ದೇಶಗಳು ಒದಗಿಸಬೇಕೆಂದು ಪಾಕಿಸ್ತಾನ ಆಗ್ರಹಿಸಿದೆ.
ಲಷ್ಕರ್ ಇ ತೊಯ್ಬಾದ ನಿರ್ದೇಶನದಂತೆ ಮತ್ತು ಪಾಕಿಸ್ತಾನ ಮಿಲಿಟರಿಯ ಅಧಿಕಾರಿಗಳ ಶಾಮೀಲಾತಿಯೊಂದಿಗೆ ಮುಂಬೈ ಭಯೋತ್ಪಾದನಾ ದಾಳಿ ನಡೆಸಲಾಗಿತ್ತು ಎಂದು ಹೆಡ್ಲಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಆದರೆ ಹೆಡ್ಲಿಯ ಆರೋಪವನ್ನು ಪಾಕಿಸ್ತಾನ ಸಾರಸಗಟಾಗಿ ತಳ್ಳಿ ಹಾಕಿ, ಇದು ದೇಶಕ್ಕೆ ಕಪ್ಪುಮಸಿ ಬಳಿಯುವ ಹೇಳಿಕೆ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.
ಕಳೆದ ಒಂದು ವಾರಗಳ ಕಾಲ ಭಾರತದ ಅಧಿಕಾರಿಗಳು ಅಮೆರಿಕದ ಎಫ್ಬಿಐ ಅಧಿಕಾರಿಗಳ ನೆರವಿನೊಂದಿಗೆ ಮುಂಬೈ ದಾಳಿ ಕುರಿತಂತೆ ಹೆಡ್ಲಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಇದೀಗ ವಿಚಾರಣೆ ಮುಕ್ತಾಯಗೊಂಡಿದ್ದು, ಭಾರತದ ಎನ್ಐಎ ಅಧಿಕಾರಿಗಳ ತಂಡ ದೇಶಕ್ಕೆ ವಾಪಸಾಗಿದೆ.
ಆ ನಿಟ್ಟಿನಲ್ಲಿ ಹೆಡ್ಲಿ ತನಿಖೆಯ ವಿವರನ್ನು ಭಾರತ ಮತ್ತು ಅಮೆರಿಕ ಪಾಕಿಸ್ತಾನಕ್ಕೆ ನೀಡಬೇಕೆಂದು ಪಾಕಿಸ್ತಾನದ ಹಿರಿಯ ಅಧಿಕಾರಿಗಳು ತಿಳಿಸಿರುವುದಾಗಿ ದಿ ನೇಷನ್ ಪತ್ರಿಕೆ ವರದಿ ತಿಳಿಸಿದೆ. ಹೆಡ್ಲಿ ತನಿಖೆ ಕುರಿತಂತೆ ಪಾಕಿಸ್ತಾನಕ್ಕೆ ಈವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಜೂನ್ 3ರಿಂದ ಪ್ರಾರಂಭಗೊಂಡ ವಿಚಾರಣೆಯಲ್ಲಿ ಹೆಡ್ಲಿ ಮತ್ತು ಆತನ ಪರ ವಕೀಲರು ಭಾರತದ ತನಿಖಾಧಿಕಾರಿಗಳ ತಂಡಕ್ಕೆ ಸೂಕ್ತ ಉತ್ತರವನ್ನು ನೀಡಿರುವುದಾಗಿ ಅಮೆರಿಕದ ಜಸ್ಟೀಸ್ ಡಿಪಾರ್ಟ್ಮೆಂಟ್ ವಿವರಿಸಿದೆ. ಅಲ್ಲದೇ ಹೆಡ್ಲಿ ವಿಚಾರಣೆಯ ಮಾಹಿತಿಯನ್ನು ಭಾರತ ಮತ್ತು ಅಮೆರಿಕ ಬಹಿರಂಗಗೊಳಿಸುವುದಿಲ್ಲ ಎಂಬ ಬಗ್ಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ.
ಹೆಡ್ಲಿ ವಿಚಾರಣೆಯ ಸಂದರ್ಭದಲ್ಲಿ ಮಹತ್ವದ ವಿವರಗಳನ್ನು ನೀಡಿದ್ದು, ಅವುಗಳ ರಹಸ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.