ಭಾರತದ ವಿರುದ್ಧ ನಡೆಯುತ್ತಿರುವ ಭಯೋತ್ಪಾದನಾ ದಾಳಿಗಳ ವಿರುದ್ಧ ಪಾಕಿಸ್ತಾವು ವಿಶ್ವಾಸಾರ್ಹ ಕಾರ್ಯ ಕೈಗೊಳ್ಳುವ ತನಕ ಇಸ್ಲಾಮಾಬಾದ್ ಜತೆಗೆ ಮಾತುಕತೆಯ ಪ್ರಶ್ನೆಯೇ ಇಲ್ಲ ಎಂದು ನವದೆಹಲಿ ಗುರುವಾರ ಪುನರುಚ್ಚರಿಸಿದೆ.
"ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಭಾರತದ ವಿರದ್ಧ ಭಯೋತ್ಪಾದನಾ ದಾಳಿಗಳ ವಿರುದ್ಧ ಪಾಕಿಸ್ತಾನವು ವಿಶ್ವಾಸಾರ್ಹ ಕ್ರಮ ಕೈಗೊಳ್ಳುವ ತನಕ ಮಾತುಕತೆ ನಡೆಸುವುದಿಲ್ಲ" ಎಂಬುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ಸೆಂ ಕೃಷ್ಣ ಹೇಳಿದ್ದಾರೆ.
ಮಾತುಕತೆ ಪ್ರಕ್ರಿಯೆಯನ್ನು ಬೇಷರತ್ತಾಗಿ ಮುಂದುವರಿಸುವುದನ್ನು ತಾನು ಸ್ವಾಗತಿಸುವುದಾಗಿ ಪಾಕಿಸ್ತಾನ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ಯಾಚಿಸಿದ ವೇಳೆ ಸಚಿವರು ಮೇಲಿನಂತೆ ಉತ್ತರಿಸಿದರು.
ಮಾತಕತೆಯ ಮೂಲಕವೇ ಉಭಯ ರಾಷ್ಟ್ರಗಳು ಪರಸ್ಪರ ಅರಿತುಕೊಳ್ಳಬಹುದು ಮತ್ತು ಪ್ರದೇಶವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂಬುದಾಗಿ ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಅಬ್ದುಲ್ ಬಶೀರ್ ವಾರದ ಮಾಹಿತಿ ನೀಡುವ ವೇಳೆ ಹೇಳಿದ್ದಾರೆ.
ಅಲ್ಲದೆ ಉಭಯ ರಾಷ್ಟ್ರಗಳು ಕ್ಷಿಪ್ರವಾಗಿ ತಮ್ಮ ಮಾತುಕತೆ ಪ್ರಕ್ರಿಯೆಯನ್ನು ಮುಂದುವರಿಸಲಿವೆ ಎಂಬ ಆಶಾಭಾವನೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಮಾತುಕತೆಯ ಮುಂದುವರಿಕೆಯನ್ನು ಕಾಶ್ಮೀರ ವಿವಾದ ಬಗೆಹರಿಸುವುದರೊಂದಿಗೆ ತಳುಕು ಹಾಕಿರುವ ಬಶೀರ್, ಈ ಪ್ರಾಂತ್ಯದ ಶಾಂತಿಯು ಇದರ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ.
ಅದಾಗ್ಯೂ, ಮುಂಬೈದಾಳಿಯ ರೂವಾರಿ ಹಫೀಜ್ ಸಯೀದ್ನನ್ನು ಬಿಡುಗಡೆ ಮಾಡಿರುವ ಕಾರಣ ಉಪಕಂಡದಲ್ಲಿ ಉದ್ವಿಗ್ನತೆ ಹೆಚ್ಚಿದೆ ಎಂದು ಹೇಳಿರುವ ಭಾರತ ತನ್ನ ನಿಲುವಿಗೆ ಅಂಟಿಕೊಂಡಿದೆ. |