ಆಂಧ್ರಪ್ರದೇಶದ ನಾಯಕತ್ವದ ಬದಲಾವಣೆ ವಿಷಯ ತಮ್ಮ ಸುಪರ್ದಿಗೆ ಬಿಡುವಂತೆ ಹಾಗೂ ತಾವು ಎಲ್ಲವನ್ನೂ ನೋಡಿಕೊಳ್ಳುವುದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯ ಗಾಂಧಿ ಅವರು ತಮ್ಮನ್ನು ಭೇಟಿ ಮಾಡಿದ್ದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ. ಎಸ್. ರಾಜಶೇಖರ ರೆಡ್ಡಿ ಪುತ್ರ ಜಗನ್ಮೋಹನ್ ರೆಡ್ಡಿ ಅವರಿಗೆ ತಿಳಿಸಿದ್ದಾರೆ.
ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ರಾಜಶೇಖರ್ ರೆಡ್ಡಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಬಳಿಕ ಅವರ ಪುತ್ರ ಜಗನ್ಮೋಹನ್ ರೆಡ್ಡಿಯವರನ್ನೇ ಮುಖ್ಯಮಂತ್ರಿ ಗದ್ದುಗೆಗೆ ಏರಿಸಬೇಕೆಂದು ಅವರ ಪರ ಕಾಂಗ್ರೆಸ್ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ.
ಆದರೆ 'ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಮಾಡುವ ನಿರ್ಧಾರವನ್ನು ನಮಗೆ ಬಿಡಿ, ನಾವು ನೋಡಿಕೊಳ್ಳುತ್ತೇವೆ' ಎಂದು ಸೋನಿಯ ಹೇಳಿದ್ದಾಗಿ ಜಗನ್ಮೋಹನ್ ವರದಿಗಾರರಿಗೆ ತಿಳಿಸಿದರು.ಹಣಕಾಸು ಕುರಿತ ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಭಾಗವಹಿಸಲು ತೆರಳಿದ್ದ ಜಗನ್ಮೋಹನ್, ಪಕ್ಷದ ನಾಯಕತ್ವದಲ್ಲಿ ಸಂಪೂರ್ಣ ವಿಶ್ವಾಸವಿದ್ದು, ಅವರು ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ಧವಾಗಿರುವುದಾಗಿ ಹೇಳಿದ್ದಾರೆ.
ತಂದೆಯ ಸಾವಿನ ಬಳಿಕ ಮುಖ್ಯಮಂತ್ರಿಯಾಗಿ ತಮ್ಮ ನೇಮಕಕ್ಕೆ ಆಂದೋಳನ ನಡೆಯುತ್ತಿದೆಯೆಂಬ ವರದಿ ನಿಜವೇ ಎಂಬ ಪ್ರಶ್ನೆಗೆ ಅವೆಲ್ಲ ಊಹಾಪೋಹವೆಂದು ಕಡಪಾದಿಂದ ಪ್ರಥಮಬಾರಿಗೆ ಸಂಸದರಾದ ಜಗನ್ಮೋಹನ್ ತಿಳಿಸಿದರು.
ಪಕ್ಷದಲ್ಲಿನ ಸ್ಥಿತಿಗತಿಗಳ ಬಗ್ಗೆ ತಾವು ವರಿಷ್ಠಮಂಡಳಿಗೆ ವಿವರಿಸಿದ್ದಾಗಿಯೂ ಅವರು ಹೇಳಿದ್ದಾರೆ. ಜಗನ್ಮೋಹನ್ ಅವರನ್ನು ತಂದೆಯ ನಿಕಟವರ್ತಿ ಮತ್ತು ಜಗನ್ಗೆ ಮುಖ್ಯಮಂತ್ರಿ ಪಟ್ಟ ಆಂದೋಳನದ ಹಿಂದಿರುವ ವ್ಯಕ್ತಿಯಾದ ರಾಮಚಂದ್ರರಾವ್ ಜತೆಗೂಡಿದ್ದರು.