ಕಾನೂನು ಬಾಹಿರವಾಗಿ ಭೂಮಿ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಮಾಜಿ ವಿಶ್ವಸುಂದರಿ, ಬಾಲಿವುಡ್ ಬೆಡಗಿ, ಬಚ್ಚನ್ ಸೊಸೆ ಐಶ್ವರ್ಯಾ ರೈ ಮೇಲೆ ಪೊಲೀಸ್ ಮೊಕದ್ದಮೆ ದಾಖಲಿಸಲಾಗಿದೆ.
ಐಶ್ವರ್ಯಾ ರೈ ಸೇರಿದಂತೆ, ಸುಝ್ಲಾನ್ ಸಂಸ್ಥೆಯ ಅಧ್ಯಕ್ಷ ತುಲ್ಸೀಬಾಯ್ ತಂತಿ ಹಾಗೂ ಇನ್ನಿತರರು ಇದೀಗ ಕಾನೂನು ಬಾಹಿರವಾಗಿ ಭೂಮಿ ಖರೀದಿ ಆರೋಪವನ್ನು ಎದುರಿಸುತ್ತಿದ್ದಾರೆ.
ಐಶ್ವರ್ಯಾ ರೈ ಸುಝ್ಲಾನ್ ಸಂಸ್ಥೆಯ ಪಾಲುದಾರರಾಗಿರುವುದರಿಂದ ಸಂಸ್ಥೆಯ ಭೂಮಿ ಖರೀದಿ ವಿಚಾರದಿಂದಾಗಿ ಐಶ್ ಈ ವಿವಾದದಲ್ಲೀಗ ಸಿಲುಕಿದ್ದಾರೆ. ಮಂಗಳವಾರ ಐಶ್ ವಿರುದ್ಧ ನಾಸಿಕದ ನಂದುರ್ಬಾರ್ ಜಿಲ್ಲೆಯ ಆನಂದ್ ಲಾಲಾ ಠಾಕ್ರೆ ಎಂಬವರು ದೂರು ದಾಖಲಿಸಿದ್ದು, ತನಗೆ ಸೇರಿದ್ದ ಭೂಮಿಯನ್ನು ಕಾನೂನು ಬಾಹಿರವಾಗಿ ಸುಝ್ಲಾನ್ ಸಂಸ್ಥೆಯ ಹೆಸರಿಗೆ ವರ್ಗಾಯಿಸಿದ್ದಲ್ಲದೇ, ಅಲ್ಲಿ ಗಾಳಿ ಶಕ್ತಿ ಉತ್ಪಾದಿಸುವ ಕಾರ್ಖಾನೆ (ವಿಂಡ್ ಮಿಲ್) ಸ್ಥಾಪಿಸುವ ಯೋಜನೆ ಹೊಂದಿದ್ದಾರೆ ಎಂದು ಆನಂದ್ ಲಾಲ್ ಠಾಕ್ರೆ ದೂರಿದ್ದಾರೆ.
ಸುಝ್ಲಾನ್ ಸಂಸ್ಥೆ ನಂದುರ್ಬಾರ್ ಜಿಲ್ಲೆಯ ಧಂಡನೆ ಎಂಬ ಹಳ್ಳಿಯಲ್ಲಿ ಹಾಗೂ ಧುಲೆ ಜಿಲ್ಲೆಯಲ್ಲಿ ಗಾಳಿ ಶಕ್ತಿ ತಯಾರಿಕಾ ಕಾರ್ಖಾನೆಯ ಯೋಜನೆ ರೂಪಿಸಿತ್ತು. ಐಶ್, ತುಲ್ಸೀಬಾಯ್ ತಂತಿಯಷ್ಟೇ ಅಲ್ಲದೆ, ಸಂಸ್ಥೆಯ ಇತರ ಪಾಲುದಾರರೂ ಸೇರಿದಂತೆ, ಮಂಗಲ್ ಸರ್ಜನ್, ಮೋಹನ್ ಜವಾನ್, ಜಯಂತ್ ಭೋಸ್ಲೆ, ಅನಿಲ್ ಗಂಗಾವನೆ, ಶರಣ್ಸಿಂಗ್ ಸಿದ್ದುಸಿಂಗ್, ಹರೀಶ್ ಪಂಥ್ ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ.
ಠಾಕ್ರೆ ತಮ್ಮ ದೂರಿನಲ್ಲಿ, ಸರ್ಜನ್ ರಿಯಾಲ್ಟೀಸ್ ಎಂಬ ಸಂಸ್ಥೆ ತನ್ನ ಭೂಮಿಯನ್ನು ಒಪ್ಪಂದದ ಮೇರೆಗೆ ಪಡೆದಿತ್ತು. ನಂತರ ಇದನ್ನು ಸುಝ್ಲಾನ್ ಸಂಸ್ಥೆಯ ಹೆಸರಿಗೆ ಕಾನೂನು ಬಾಹಿರವಾಗಿ ವರ್ಗಾಯಿಸಲಾಗಿದೆ. ಹಾಗೂ ಇದರಿಂದ ನನಗೆ ಭೂಮಿಯೇ ಇಲ್ಲದಂತಾಗಿದೆ ಎಂದು ದೂರಿದ್ದಾರೆ.