ಈಗಾಗಲೇ ಆರ್ಥಿಕ ಸಂಕಷ್ಟದಿಂದ ತೊಳಲಾಡುತ್ತಿರುವ ಏರ್ ಇಂಡಿಯಾ ಮತ್ತೊಂದು ವಿವಾದದಲ್ಲಿ ಸಿಲುಕಿದೆ. ಮಂಬೈಯಿಂದ ಮಂಗಳೂರಿಗೆ ಹಾರಿದ್ದ ವಿಮಾನದಲ್ಲಿ ಸುರಕ್ಷತೆಯನ್ನು ಧಿಕ್ಕರಿಸಿ ಹೆಚ್ಚುವರಿ ಮೂವರು ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದ ವಿಚಾರವೀಗ 'ಏರ್ ಇಂಡಿಯಾ'ವನ್ನು ನಲುಗಿಸುತ್ತಿದೆ.
ವೈಮಾನಿಕ ಪ್ರಯಾಣದಲ್ಲಿ ಅನುಸರಿಸಬೇಕಾದ ಸುರಕ್ಷತಾ ನಿಯಮಾವಳಿಗಳನ್ನು ಏರ್ ಇಂಡಿಯಾ ಗಾಳಿಗೆ ತೂರಿದ್ದು ಮೇ 5ರಂದು. 172 ಸೀಟುಗಳ ಎ-321 ಏರ್ಬಸ್ ಮುಂಬೈ - ಮಂಗಳೂರು 'ಐಸಿ 179' ವಿಮಾನದ ಡೋರ್ಗೆ ಹಾನಿಯಾಗಿದ್ದ ಕಾರಣ ಪ್ರಯಾಣಿಕರನ್ನು ಮತ್ತೊಂದು ವಿಮಾನಕ್ಕೆ ವರ್ಗಾಯಿಸಲಾಗಿತ್ತು. ಆ ವಿಮಾನದ ಗರಿಷ್ಠ ಸೀಟುಗಳಿಗಿಂತ ಹೆಚ್ಚುವರಿಯಾಗಿ ಮೂವರು ಪ್ರಯಾಣಿಕರನ್ನು ತುಂಬಿಸಿಕೊಂಡದ್ದೇ ಇದೀಗ ವಿವಾದವಾಗಿರುವುದು.
ಮುಂಬೈಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೇ 5ರಂದು ಮುಂಬೈ-ಮಂಗಳೂರು ಐಸಿ 179 ವಿಮಾನವು ಏರ್ಬ್ರಿಡ್ಜ್ಗೆ ಡಿಕ್ಕಿ ಹೊಡೆದ ಪರಿಣಾಮ ಪ್ರವೇಶ ಬಾಗಿಲಿಗೆ ಹಾನಿಯುಂಟಾಗಿತ್ತು. ವಿಮಾನದಲ್ಲಿದ್ದ 172 ಮಂದಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಮತ್ತೊಂದು ವಿಮಾನವನ್ನು ಹತ್ತಿಸಲಾಗಿತ್ತು.
ಇದರ ಬಗ್ಗೆ ತನಿಖೆ ನಡೆಸುತ್ತಿರುವ ನಾಗರಿಕ ವಿಮಾನ ಪ್ರಧಾನ ನಿರ್ದೇಶನಾಲಯವು ಮೂರು ಮಂದಿ ಹೆಚ್ಚುವರಿ ಪ್ರಯಾಣಿಕರನ್ನು ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡಿರುವ ಅಂಶವನ್ನು ಬಹಿರಂಗಪಡಿಸಿದೆ.
"ಒಬ್ಬ ಮಹಿಳಾ ಪ್ರಯಾಣಿಕರನ್ನು ಕಾಕ್ಪಿಟ್ನಲ್ಲಿ ಹಾಗೂ ವಿಮಾನ ಟೇಕ್ ಆಫ್ ಆಗುವಾಗ ಮತ್ತು ಇಳಿಯುವಾಗ ಸಿಬಂದಿಗಳು ಕುಳಿತುಕೊಳ್ಳುವ ಮಡಚಬಹುದಾದ ಸೀಟಿನಲ್ಲಿ ಇತರ ಇಬ್ಬರು ಪ್ರಯಾಣಿಕರನ್ನು ಕುಳ್ಳಿರಿಸಲಾಗಿತ್ತು" ಎಂದು ಮೂಲಗಳು ತಿಳಿಸಿವೆ.
ನಿಯಮಗಳ ಪ್ರಕಾರ ಕಾಕ್ಪಿಟ್ಗೆ ಪ್ರಯಾಣಿಕರು ಪ್ರವೇಶಿಸಲು ಅವಕಾಶವೇ ಇಲ್ಲ. ಅಮೆರಿಕಾ ವಿಮಾನ ಅಪಹರಣದ ನಂತರ ವಿಮಾನದ ಸಿಬಂದಿಗಳೂ ಪೈಲಟ್ ಅನುಮತಿಯಿಲ್ಲದೆ ಕಾಕ್ಪಿಟ್ ಪ್ರವೇಶಿಸುವಂತಿಲ್ಲ.
ಗಂಭೀರ ಸುರಕ್ಷತಾ ಲೋಪ ಕಂಡು ಬಂದಿರುವ ಹಿನ್ನಲೆಯಲ್ಲಿ ನಾಗರಿಕ ವಿಮಾನ ಪ್ರಧಾನ ನಿರ್ದೇಶನಾಲಯವು ಏರ್ ಇಂಡಿಯಾ ವಿರುದ್ಧ ನಿಯಮಾವಳಿಗಳ ಉಲ್ಲಂಘನೆಗಾಗಿ ಕ್ರಿಮಿನಲ್ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ. ಏರ್ ಇಂಡಿಯಾದ ನೌಕರರು, ಉನ್ನತ ಅಧಿಕಾರಿಗಳನ್ನು ವಿಚಾರಣೆ ನಡೆಸಿದ ನಂತರ ಕಠಿಣ ಕ್ರಮ ಖಚಿತ ಎಂದು ಮೂಲಗಳು ತಿಳಿಸಿವೆ.
ಒಂಬತ್ತು ಸಿಬಂದಿಗಳ ಅಮಾನತು ಈ ಸಂಬಂಧ ತಕ್ಷಣ ಕ್ರಮಕ್ಕೆ ಮುಂದಾಗಿರುವ ಏರ್ ಇಂಡಿಯಾ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೈಲಟ್, ಸಹ-ಪೈಲಟ್ ಮತ್ತು ಇಂಜಿನಿಯರ್ಗಳೂ ಸೇರಿದಂತೆ ಒಟ್ಟು ಒಂಬತ್ತು ನೌಕರರನ್ನು ವಜಾ ಮಾಡಿದೆ.
"ನಮ್ಮ ಒಂಬತ್ತು ಮಂದಿ ಸಿಬಂದಿಗಳನ್ನು ವಜಾ ಮಾಡಿದ್ದೇವೆ. ಜತೆಗೆ ಇದರಲ್ಲಿ ನೇರ ಭಾಗಿಗಳಾದ ಪೈಲಟ್ ಮತ್ತು ಸಹ-ಪೈಲಟ್ಗಳ ಪರವಾನಗಿಯನ್ನು ರದ್ದುಪಡಿಸಿದ್ದೇವೆ. ತಪ್ಪಿತಸ್ಥರ ವಿರುದ್ಧ ಇದೇ ರೀತಿಯ ಕ್ರಮವನ್ನು ತೆಗೆದುಕೊಳ್ಳಲಿದ್ದೇವೆ" ಎಂದು ಏರ್ ಇಂಡಿಯಾದ ಕಾರ್ಪೊರೇಟ್ ಕಮ್ಯುನಿಕೇಷನ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಜಿತೇಂದರ್ ಭಾರ್ಗವ ತಿಳಿಸಿದ್ದಾರೆ. |