ಪಕ್ಷದಲ್ಲಿ ಯಾವುದೇ ರೀತಿಯಾದ ಆಂತರಿಕ ಭಿನ್ನಮತವಿಲ್ಲ. ಏನೇ ಸಮಸ್ಯೆ ಇದ್ದರೂ ಯಡಿಯೂರಪ್ಪ ನೇತೃತ್ವದಲ್ಲಿ ಪರಿಹಾರ ಕಂಡುಕೊಳ್ಳುವುದಾಗಿ ಸಾರಿಗೆ ಸಚಿವ ಆರ್. ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನಮ್ಮೆಲ್ಲರ ಪ್ರಶ್ನಾತೀತ ನಾಯಕ. ಎಲ್ಲಾ ಜಿಲ್ಲಾ ಮಂತ್ರಿಗಳೂ ಸ್ನೇಹಿತರೇ. ನಾವೆಲ್ಲ ಅಣ್ಣ-ತಮ್ಮಂದಿರಂತೆ ಇದ್ದೇವೆ. ಹಿರಿಯ ನಾಯಕ ಈಶ್ವರಪ್ಪನವರು ಪಕ್ಷ ಬೆಳೆಸುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಈಗಲೂ ಅವರ ಬಗ್ಗೆ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬಿಜೆಪಿಯೊಳಗೆ ಏನೋ ನಡೆದಿದೆ ಎನ್ನುವಂತೆ ವರ್ತಿಸುತ್ತಿವೆ. ಬಿಜೆಪಿ ಬಲ ಕುಸಿದಿದೆ ಎನ್ನುವ ಭ್ರಮೆಯಲ್ಲಿ ಪ್ರತಿಪಕ್ಷಗಳು ಮುಳುಗಿ ಹೋಗಿವೆ ಎಂದು ಅವರು ಆರೋಪಿಸಿದರು. |