ಪಕ್ಷೇತರ ಅಭ್ಯರ್ಥಿಗಳ ಪೂರ್ಣ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್, ತಾನು ಸರ್ಕಾರ ರಚಿಸುವುದಾಗಿ ಹರಿಯಾಣ ರಾಜ್ಯಪಾಲ ಜಗನ್ನಾಥ್ ಪಹಡಿಯಾ ಅವರಿಗೆ ಶುಕ್ರವಾರ ತಿಳಿಸಿದೆ.
ತಾವು ಕಾಂಗ್ರೆಸ್ನ್ನು ಬೆಂಬಲಿಸುವುದಾಗಿ ಏಳನೇ ಪಕ್ಷೇತರ ಅಭ್ಯರ್ಥಿ ಪ್ರಹ್ಲಾದ್ ಸಿಂಗ್ ಅವರು ಹೇಳಿದ್ದಾರೆ. ಈಗಾಗಲೇ ಇತರ ಆರು ಮಂದಿ ಪಕ್ಷೇತರ ಅಭ್ಯರ್ಥಿಗಳ ಬೆಂಬಲ ಪಡೆದಿರುವ ಕಾಂಗ್ರೆಸ್ ಈಗ ಸರ್ಕಾರ ರಚನೆಗೆ ಮುಂದಾಗಿದೆ.
ಈ ಚುನಾವಣೆಯಲ್ಲಿ ಪರಾಭವಗೊಂಡಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಫೂಲ್ಚಂದ್ ಮುಲಾನ್ ಅವರು ಏಳು ಪಕ್ಷೇತರ ಅಭ್ಯರ್ಥಿಗಳ ಬೆಂಬಲ ಪತ್ರವನ್ನು ಪಡೆದುಕೊಂಡು ಅದನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ.
ಏಳು ಪಕ್ಷೇತರ ಅಭ್ಯರ್ಥಿಗಳ ಪತ್ರವನ್ನು ನಾನು ರಾಜ್ಯಪಾಲರಿಗೆ ಸಲ್ಲಿಸಿದ್ದೇವೆ ಎಂದು ಮುಲಾನ ಅವರು ರಾಜಭವನದಿಂದ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ. ಸರ್ಕಾರ ರಚಿಸಲು ಕಾಂಗ್ರೆಸ್ಗೆ 46ಸದಸ್ಯರ ಅಗತ್ಯವಿರುವುದರಿಂದ ಪಕ್ಷೇತರ ಅಭ್ಯರ್ಥಿಗಳ ಮೊರೆ ಹೋಗಿತ್ತು.
90ಸದಸ್ಯ ಬಲ ಹೊಂದಿದ್ದ ಹರಿಯಾಣ ಅಸೆಂಬ್ಲಿಗೆ ಅಕ್ಟೋಬರ್ 13ರಂದು ನಡೆದ ಚುನಾವಣೆಯ ಫಲಿತಾಂಶ ಗುರುವಾರ ಹೊರಬಿದ್ದಿತ್ತು. ಆಡಳಿತಾರೂಢ ಕಾಂಗ್ರೆಸ್ 40ಸ್ಥಾನಗಳಲ್ಲಿ ಜಯಗಳಿಸಿತ್ತು. ಪ್ರಮುಖ ವಿರೋಧ ಪಕ್ಷವಾಗಿದ್ದ ಇಂಡಿಯನ್ ನ್ಯಾಷನಲ್ ಲೋಕದಳ-31, ಅಕಾಲಿ ದಳ-01, ಹರಿಯಾಣ ಜನಹಿತ ಕಾಂಗ್ರೆಸ್-06, ಬಿಜೆಪಿ-04, ಬಿಎಸ್ಪಿ-01 ಹಾಗೂ ಪಕ್ಷೇತರರು 07ಮಂದಿ ಗೆಲುವು ಸಾಧಿಸಿದ್ದರು.