ಮುಂಬೈನಲ್ಲಿ ನವೆಂಬರ್ 26ರಂದು ಸಂಭವಿಸಿದ ಭಯೋತ್ಪಾದನೆ ದಾಳಿಗಳ ಪ್ರಮುಖ ಆರೋಪಿ ಹಫೀಜ್ ಸಯೀದ್ನನ್ನು ಲಾಹೋರ್ ಹೈಕೋರ್ಟ್ ಗೃಹಬಂಧನದಿಂದ ಮಂಗಳವಾರ ಬಿಡುಗಡೆ ಮಾಡಿದೆ.
ಹಫೀಜ್ ಸಯೀದ್ ನಿಷೇಧಿತ ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥನಾಗಿದ್ದ. ಮುಂಬೈ ಭಯೋತ್ಪಾದನೆ ದಾಳಿ ಸಂಭವಿಸಿದ ಬಳಿಕ ಜಮಾತ್ ಉದ್ ದವಾ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿಷೇಧ ಹೇರಿತ್ತು. ಹಫೀಜ್ ಸಯೀದ್ನನ್ನು ಜೋಹರ್ ಪಟ್ಟಣದ ನಿವಾಸದಲ್ಲಿ ಗೃಹಬಂಧನದಲ್ಲಿ ಇರಿಸಲಾಗಿತ್ತು.
ಮುಂಬೈ ದಾಳಿಗಳಲ್ಲಿ ತಮ್ಮ ಸಂಘಟನೆಯ ಕೈವಾಡವಿಲ್ಲವೆಂದು ಸಯೀದ್ ಹೇಳಿದ್ದ. ಸಯೀದ್ ಬಿಡುಗಡೆಯಿಂದ ಮುಂಬೈ ಭಯೋತ್ಪಾದನೆ ದಾಳಿಗಳನ್ನು ಕುರಿತ ತನಿಖೆಗೆ ಪೆಟ್ಟು ಬಿದ್ದಿದೆ. ಪಾಕಿಸ್ತಾನ ತನ್ನ ಹಳೆಯ ತಂತ್ರಗಳಿಗೆ ಮರಳಿರುವುದಾಗಿ ಮತ್ತು ಪಾಕ್ ಒತ್ತಡಗಳಿಗೆ ಮಣಿದು ಸಯೀದ್ನನ್ನು ಬಿಡುಗಡೆ ಮಾಡಿರುವುದಾಗಿ ಭಾರತ ಆರೋಪಿಸಿದೆ. |