ರಾಜ್ಯದ ಆರೋಗ್ಯ ಖಾತೆ ಸಚಿವ ಬಳ್ಳಾರಿಯ ಗಣಿಕುಳ ಬಿ.ಶ್ರೀರಾಮುಲು ಅಕ್ಕನ ಪುತ್ರ, ಅಳಿಯ ಕಂಪ್ಲಿ ಶಾಸಕ 27ರ ಹರೆಯದ ಟಿ.ಎಚ್.ಸುರೇಶ್ ಬಾಬು ವಿವಾಹವನ್ನು ಅದ್ದೂರಿಯಾಗಿ ನೆರವೇರಿಸಿದ್ದು, ಇದಕ್ಕಾಗಿ ಮಾಡಿದ ಖರ್ಚು ಅಂದಾಜು 20ಕೋಟಿ ರೂಪಾಯಿ ಎನ್ನಲಾಗಿದೆ!.ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಲ್ಲಿರುವ ರೆಡ್ಡಿ ಸಹೋದರರು ಈ ಬಾರಿ ಮಾತ್ರ, ಶ್ರೀರಾಮುಲು ತನ್ನ ಅಳಿಯನ ಮದುವೆಯನ್ನು ಐಷಾರಾಮಿಯಾಗಿ ನಡೆಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.ಬಳ್ಳಾರಿಯ ಕಂಪ್ಲಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಟಿ.ಎಚ್.ಸುರೇಶ್ ಬಾಬು ಅವರ ವಿವಾಹ ಮಧ್ಯಮ ವರ್ಗದ ಎನ್.ದೀಪಾ ಅವರೊಂದಿಗೆ ಗುರುವಾರ ನೆರೆವೇರಿತ್ತು. ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ, ನೆರೆಯ ಆಂಧ್ರಪ್ರದೇಶದ ಗಣ್ಯರು ಸೇರಿದಂತೆ ಅಂದಾಜು 40ಸಾವಿರ ಮಂದಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಂಗಳೂರಿನಿಂದ ಬಳ್ಳಾರಿಗೆ ಬರಲು ಪ್ರಮುಖ ಗಣ್ಯರಿಗಾಗಿ ನಾಲ್ಕು ಹೆಲಿಕಾಪ್ಟರ್ಗಳು ಬಿಡುವಿಲ್ಲದೆ ಹಾರಾಟ ನಡೆಸಿದ್ದವು!. ಅಷ್ಟೇ ಅಲ್ಲ ಬಳ್ಳಾರಿಯ ಸುಡು, ಸುಡು ಬಿಸಿಲ ಝಳ ತಡೆಯಲು ಮದುವೆ ಸಭಾಂಗಣದಲ್ಲಿ 500 ಏರ್ ಕಂಡಿಷನರ್ಗಳನ್ನು ಹಾಕಲಾಗಿತ್ತು. ಭೂರಿ ಭೋಜನದ ತಯಾರಿಗಾಗಿ ಸುಮಾರು 200ಮಂದಿ ಬಾಣಸಿಗರು ಕಾರ್ಯ ನಿರ್ವಹಿಸಿದ್ದರು.ಸುಮಾರು 8ಎಕರೆ ಸ್ಥಳದಲ್ಲಿ ಬೃಹತ್ ಶಾಮಿಯಾನ ಹಾಕಲಾಗಿತ್ತು. ಏಕಕಾಲದಲ್ಲಿ ಸುಮಾರು ಐದು ಸಾವಿರ ಮಂದಿಗಾಗಿ ಊಟದ ಹಾಲ್ ವ್ಯವಸ್ಥೆ, ಅದರಲ್ಲೂ ವಿಐಪಿ ಹಾಗೂ ವಿವಿಐಪಿ ಹಾಲ್ ಕೂಡ ಸೇರಿದೆ.ಬಳ್ಳಾರಿ ಪ್ರಮುಖ ಎಲ್ಲಾ ಲಾಡ್ಜ್ಗಳನ್ನು ಅತಿಥಿಗಳಿಗಾಗಿ ಮುಂಗಡವಾಗಿ ಕಾಯ್ದಿರಿಸಲಾಗಿತ್ತು, ಅತಿಥಿಗಳ ವಾಹನಗಳಿಗಾಗಿ ಪಾರ್ಕಿಂಗ್ ವ್ಯವಸ್ಥೆ. ಅಷ್ಟೇ ಅಲ್ಲ ಸಸ್ಯಹಾರ ಮತ್ತು ಮಾಂಸಹಾರ ಊಟದ ಪ್ರತ್ಯೇಕ ವ್ಯವಸ್ಥೆ. ಊಟದ ಸಂದರ್ಭದಲ್ಲಿ ಜನಸಾಗರವೇ ತುಂಬಿತ್ತು. ಆದರೆ ಯಾವುದೇ ತೊಂದರೆಯಾಗದೆ ಎಲ್ಲವೂ ಸುಸೂತ್ರವಾಗಿ ನೆರವೇರಿತ್ತು. |