ಆಸ್ಟ್ರೇಲಿಯದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ದಾಳಿಯು ಉಭಯ ರಾಷ್ಟ್ರಗಳ ವಿದ್ಯಾರ್ಥಿ ಸಮುದಾಯಕ್ಕೆ ಮತ್ತು ಅಧಿಕಾರವರ್ಗಕ್ಕೆ ಆಘಾತ ಉಂಟುಮಾಡಿದೆ. ಭಾರತೀಯ ವಿದ್ಯಾರ್ಥಿಗಳ ವಿರುದ್ಧ ಜನಾಂಗೀಯ ದ್ವೇಷದ ದಾಳಿ ಹೆಚ್ಚುತ್ತಿರುವುದು ಅಲ್ಲಿನ ಭಾರತೀಯ ಸಮುದಾಯದ ಜನರನ್ನು ಭಯಗ್ರಸ್ಥರಾಗಿಸಿದೆ.
ಇಂತಹ ದಾಳಿಗಳಿಂದ ಜೀವನವೇ ಕಷ್ಟಕರವಾಗಿದೆಯೆಂದು ಅವರು ಹೇಳಿದ್ದಾರೆ. ನಿರ್ದಿಷ್ಟವಾಗಿ ಭಾರತೀಯ ವಿದ್ಯಾರ್ಥಿಗಳನ್ನು ಗುರಿಯಿರಿಸಿ ದಾಳಿ ನಡೆಸಲಾಗುತ್ತಿದೆಯೆಂದು ಆಸ್ಟ್ರೇಲಿಯದ ಮೆಲ್ಬೋರ್ನ್ನಲ್ಲಿ ಮೇ 25ರಂದು ಚೂರಿ ಇರಿತ ಮತ್ತು ಲೂಟಿಗೆ ಒಳಗಾದ 25 ವರ್ಷ ವಯಸ್ಸಿನ ಬಲ್ಜೀಂದರ್ ಸಿಂಗ್ ತಿಳಿಸಿದ್ದಾರೆ.ಇದೊಂದು ಜನಾಂಗೀಯ ದ್ವೇಷದ ದಾಳಿಯೆಂದು ತಾವು ಭಾವಿಸುವುದಾಗಿ ಅವರು ಹೇಳಿದ್ದಾರೆ.
ಭಾರತ ಸರ್ಕಾರ ವಿದ್ಯಾರ್ಥಿಗಳ ಹಿತರಕ್ಷಣೆಗೆ ಏನು ಮಾಡುತ್ತಿದೆಯೆಂದು ತಾವು ತಿಳಿಯಲು ಬಯಸುವುದಾಗಿ ಅವರು ಕೇಳಿದ್ದಾರೆ. ತಾವೀಗ ದಾಳಿಯಿಂದ ಚೇತರಿಸಿಕೊಳ್ಳುತ್ತಿದ್ದು, ಪೊಲೀಸರು ಪರಿಹಾರ ನೀಡುವ ಬಗ್ಗೆ ಸೋಮವಾರ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆಂದು ಬಲ್ಜೀಂದರ್ ಸಿಂಗ್ ತಿಳಿಸಿದರು.
ಭಾರತೀಯ ವಿದ್ಯಾರ್ಥಿಗಳು ಶಿಕ್ಷಣಾಕಾಂಕ್ಷಿಗಳಾಗಿ ಆಸ್ಟ್ರೇಲಿಯಕ್ಕೆ ಬರುವುದೇ ಬೇಡವೆಂಬ ಸಲಹೆಯನ್ನು ಅವರು ನೀಡಿದ್ದಾರೆ. 'ನನ್ನ ಸ್ನೇಹಿತನೊಬ್ಬನಿಗೆ ಆಸ್ಟ್ರೇಲಿಯಕ್ಕೆ ಬರಲು ವೀಸಾ ಸಿಕ್ಕಿದೆ. ಅವನು ಕರ್ನಾಲ್ಗೆ ಸೇರಿದ್ದು ಜನಾಂಗೀಯ ದಾಳಿ ಘಟನೆಗಳ ಬಳಿಕ ಇಲ್ಲಿಗೆ ಬರಲು ಹೆದರುತ್ತಿದ್ದಾನೆ' ಎಂದು ಸಿಂಗ್ ಹೇಳಿದರು.
ಈ ಪ್ರಕರಣದ ಬಳಿಕ ಆಸ್ಟ್ರೇಲಿಯದಲ್ಲಿ ಮುಂದುವರಿಯಲು ತಾವು ಬಯಸುವುದಿಲ್ಲವೆಂದೂ, ತಮಗೆ ಅತೀವ ಭಯವಾಗಿದೆಯೆಂದೂ ಅವರು ಹೇಳಿದ್ದಾರೆ. ಆಸ್ಟ್ರೇಲಿಯಕ್ಕೆ ಬರಲು ಯೋಜಿಸಿರುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಇಲ್ಲಿಗೆ ಬರುವುದೇ ಬೇಡವೆನ್ನುವುದು ತಮ್ಮ ಸಲಹೆ. ಇಲ್ಲಿ ಜೀವನವೇ ಇಲ್ಲವೆಂದು ಸಿಂಗ್ ಹೇಳಿದ್ದಾರೆ. |